ಬೆಂಗಳೂರು : ನಮ್ಮ ಸಮಾಜದಲ್ಲಿ ಅಳುವ ಮಕ್ಕಳಿಗೆ ಮೊದಲು ಸಿಹಿ, ಮೊಬೈಲ್ ನೀಡುವ ಮೂಲಕ ಅವರ ದೈಹಿಕ, ಮಾನಸಿಕ ಆರೋಗ್ಯ ಹದಗೆಡಿಸುವ ಕೆಲಸವನ್ನು ನಾವೇ ಮಾಡುತೇವೆ. ಆರೋಗ್ಯವಂತ ಸಮಾಜ ಮನೆಯಿಂದಲೇ ನಿರ್ಮಾಣವಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ರಾಘವಿ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಷನ್ ನಿಂದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ತಜ್ಞ ವೈದ್ಯರು, ಅರೆ ವೈದ್ಯಕೀಯ ಮತ್ತು ಇತರೆ 100ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ರಾಜ್ಯಮಟ್ಟದ 2 ನೇ ವರ್ಷದ ಆರೋಗ್ಯ ಜ್ಯೊತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜಪಾನ್ ನಲ್ಲಿ ಶೇ 4 ರಷ್ಟು ಮಂದಿಗೆ ಮಾತ್ರ ಬೊಜ್ಜಿನ ಸಮಸ್ಯೆ ಇದೆ. ಅಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಎಲ್ಲವೂ ತದ್ವಿರುದ್ಧ. ಜಪಾನ್ ನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಶತಾಯುಶಿಗಳಿದ್ದು, ಅವರು ದೈಹಿಕ ಕಸರತ್ತು, ದೇಹಾರೋಗ್ಯ ಕಾಪಾಡುವ ಕಸರತ್ತು, ಆಹಾರ, ವಿಹಾರಗಳಿಗೆ ಆದ್ಯತೆ ನೀಡುತ್ತಾರೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಜೀವ ಉಳಿಸಲು ಸಾಧ್ಯ. ಸಹಾಯ ಮಾಡಲು, ಸೇವೆ ಸಲ್ಲಿಸಲು ಹಣ ಇರಲೇಬೇಕು ಎಂಬುದು ಸರಿಯಲ್ಲ. ಸೇವೆ ಸಲ್ಲಿಸುವ ಮನೋಭಾವನೆ ಇರಬೇಕು. ನಂಬಿಕೆ, ತತ್ವ ಸಿದ್ಧಾಂತ ಏನೇ ಇದ್ದರೂ ವಿಜ್ಞಾನದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಏನಾದರೂ ಹೆಚ್ಚು ಕಡಿಮೆ ಆದರೆ ದೇವರ ಬಳಿ ಅಲ್ಲ, ಎಲ್ಲರೂ ವೈದ್ಯರ ಬಳಿ ಹೋಗುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ, ರಸಗೊಬ್ಬರ ಸಚಿವರಾಗಿದ್ದಾಗ ತಾವು ಇಡೀ ದೇಶಕ್ಕೆ ಔಷಧಗಳನ್ನು ಪೂರೈಸುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆ ಸಂದರ್ಭದಲ್ಲಿ ಆರೋಗ್ಯ ವಲಯದ ಕೊಡುಗೆ, ಸೇವೆಯನ್ನು ಕಣ್ಣಾರೆ ಕಂಡಿದ್ದೆ. ಆಪತ್ಕಾಲದಲ್ಲಿ ಆರೋಗ್ಯ ಸಿಬ್ಬಂದಿ ಅನನ್ಯ ಕೊಡುಗೆ ನೀಡಿದೆ ಎಂದರು.
ಅರಣ್ಯ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ, ಅರುಣ್ ಗುರೂಜಿ, ರಾಘವಿ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಷನ್ ಅಧ್ಯಕ್ಷ ರಾಘವೇಂದ್ರ ಸುಂಟ್ರಹಳ್ಳಿ, ಚಿತ್ರನಟಿಯರಾದ ಸುಧಾರಾಣಿ, ಕಾರುಣ್ಯ ರಾಮ್ ಗೌಡ, ಟ್ರಸ್ಟ್ ರಘು, ನಳೀನಿ, ಶ್ರೇತಾ ಜಾಧವ್ ಮತ್ತು ಶ್ವೇತಗೌಡ ಮತ್ತಿತರರು ಉಪಸ್ಥಿತರಿದ್ದರು.



