“ಪಿನಾಕ “ಚಿತ್ರದ ಸುದ್ದಿಗೋಷ್ಠಿಯ ವೇಳೆ ಮಾಹಿತಿ ಹಂಚಿಕೊಂಡ ಚಿತ್ರತಂಡ !
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಿನಾಕ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಭರ್ಜರಿ ಸೆಟ್ ಹಾಕಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ನೆಲಮಂಗಲ ಬಳಿಕ 6 ಎಕರೆ ಪ್ರದೇಶದಲ್ಲಿ ಅದ್ಧೂರಿ ಸೆಟ್ ಹಾಕಿ 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯವನ್ನು ನಿರ್ಮಾಣ ಮಾಡಲಾಗಿದೆ. ಸುದ್ದಿಗೋಷ್ಠಿ ನಡೆಸಿ ಇತ್ತೀಚೆಗೆ ಚಿತ್ರತಂಡ ಮಾಹಿತಿ ನೀಡಿದೆ.
ಡ್ಯಾನ್ಸ್ ಮಾಸ್ಟರ್ ಧನಂಜಯ್ ‘ಪಿನಾಕ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕ್ಷುದ್ರ ಹಾಗೂ ರುದ್ರ ಎಂಬ ಎರಡು ಪಾತ್ರಗಳಲ್ಲಿ ಗೋಲ್ಡನ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ನೂರಾರು ಜ್ಯೂನಿಯರ್ ಆರ್ಟಿಸ್ಟ್ಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸುತ್ತಿದ್ದಾರೆ. ‘ಪಿನಾಕ’ ಎಂದರೆ ತ್ರಿಶೂಲ ಎಂಬ ಅರ್ಥ ಇದೆ. ಚಿತ್ರದಲ್ಲಿ ‘ಪಿನಾಕ’ ರಕ್ಷಕನಾಗಿ ಕಾವಲುಗಾರ ಪರಂಪರೆಯ ಕಥೆ ತೆರೆಗೆ ಬರಲಿದೆ.
ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪಿನಾಕ’ ಕಥೆ, ಮೇಕಿಂಗ್ ಎಲ್ಲದರ ಬಗ್ಗೆ ಅವರು ಮಾತನಾಡಿದ್ದಾರೆ. ಚಿತ್ರದ ಒಂದು ಎಪಿಸೋಡ್ ಡಾ. ರಾಜ್ಕುಮಾರ್ ನಟನೆಯ ‘ಮಯೂರ’ ಚಿತ್ರವನ್ನು ಮೀರಿಸುವಂತಿದೆ ಎಂದಿದ್ದಾರೆ. ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಣ್ಣಾವ್ರ ‘ಮಯೂರ’ ಚಿತ್ರವನ್ನು ಮೀರಿಸುವ ಸಿನಿಮಾ ಮತ್ತೆ ಬರೋಕೆ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
“ನಾನು ಗಣೇಶ್ ಜೊತೆ ಬಹಳ ಹಿಂದೆ ಒಂದು ಚಿತ್ರದಲ್ಲಿ ನಟಿಸಿದ್ದೆ. ಬಳಿಕ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಒಟ್ಟಿಗೆ ನಟಿಸಿ ನಮ್ಮ ಬಾಂಧವ್ಯ ಗಟ್ಟಿಯಾಯಿತು. ಈ ಚಿತ್ರದಲ್ಲಿ ಆ ಪಾತ್ರ ನಾನೇ ಮಾಡಬೇಕು ಎಂದು ಪಟ್ಟು ಹಿಡಿದು ಮಾಡಿಸುತ್ತಿದ್ದಾರೆ. ನನಗೆ ಬಹಳ ಹೆಮ್ಮೆ ಇದೆ. ಗಣೇಶ್ಗೆ ‘ಪಿನಾಕ’ ಸಿನಿಮಾ ಅವರ ಚಿತ್ರಬದುಕಿನಲ್ಲಿ ಐತಿಹಾಸಿಕವಾಗಿ ನಿಲ್ಲಲಿದೆ” ಎಂದು ಶ್ರೀನಿವಾಸ್ ಮೂರ್ತಿ ಮಾತು ಆರಂಭಿದ್ದಾರೆ.
ಬಳಿಕ ಮಾತನಾಡುತ್ತಾ ಡಾ. ರಾಜ್ಕುಮಾರ್ ನಟನೆಯ ‘ಮಯೂರ’ ಚಿತ್ರವನ್ನು ಶ್ರೀನಿವಾಸ್ ಮೂರ್ತಿ ಪ್ರಸ್ತಾಪಿಸಿದ್ದಾರೆ. “ಹಿಂದೆ ರಾಜ್ಕುಮಾರ್ ನಟನೆಯ ‘ಮಯೂರ’, ‘ಕವಿರತ್ನ ಕಾಳಿದಾಸ’ ರೀತಿಯ ಐತಿಹಾಸಿಕ, ಪೌರಾಣಿಕ, ಭಕ್ತಿಪ್ರಧಾನ ಸಿನಿಮಾಗಳನ್ನು ನೋಡಿದ್ದೀರ. ನನಗೆ ಅನ್ನಿಸುವುದು ಈ ಚಿತ್ರದಲ್ಲಿ ‘ಪಿನಾಕ’ ಎಂಬ ನಮ್ಮ ಎಪಿಸೋಡ್ ಏನಿದೆ. ಅದು ‘ಮಯೂರ’ ಸಿನಿಮಾ ಮಟ್ಟಕ್ಕಿಂತ ಸ್ವಲ್ಪ ಜಾಸ್ತಿ ಅಂತ ನನಗೆ ಅನ್ನಿಸ್ತಿದೆ. ಸೆಟ್ ನೋಡಿರುವುದು 10% ಮಾತ್ರ. ಟೆಕ್ನಿಕಲಿ ಎಲ್ಲಾ ಸಿದ್ಧವಾದ ಮೇಲೆ ಇದರ ತಾಕತ್ತು ಗೊತ್ತಾಗುತ್ತದೆ” ಎಂದು ಶ್ರೀನಿವಾಸ್ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಾನು ಯಾಕೆ ‘ಮಯೂರ’ ಚಿತ್ರಕ್ಕೆ ಹೋಲಿಸುತ್ತೇನೆ ಎಂದರೆ ಅಲ್ಲಿ ಎಲ್ಲಾ ಪಾತ್ರಧಾರಿಗಳಿಗೆ ಒಳ್ಳೆ ಅವಕಾಶ ಇತ್ತು. ವಜ್ರಮುನಿ, ಶ್ರೀನಾಥ್ ಹೀಗೆ ಹಲವರು ನಟಿಸಿದ್ದರು. ‘ಪಿನಾಕ’ ಚಿತ್ರದಲ್ಲಿ ಕೂಡ ಎಲ್ಲಾ ಪಾತ್ರಗಳಿಗೆ ಸಮಾನ ಅವಕಾಶ ಸಿಕ್ಕಿದೆ. ನಿನ್ನೆ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 2 ಪುಟಗಳ ಸಂಭಾಷಣೆಯನ್ನು ಒಂದೇ ಟೇಕ್ನಲ್ಲಿ ಗಣೇಶ್ ಮಾಡಿದರು. ಆ ಸೀನ್ ನೋಡಿದರೆ ನಿಮಗೂ ಥ್ರಿಲ್ ಆಗುತ್ತದೆ. ಗಣೇಶ್ಗೆ ಭಾಷೆಯ ಮೇಲೆ ಬಹಳ ಹಿಡಿತ ಚೆನ್ನಾಗಿದೆ. ರಾಜ್ಕುಮಾರ್ ಇವತ್ತಿಗೂ ಯಾಕೆ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ ಅಂದ್ರೆ ಅವ್ರ ಭಾಷೆ, ಬಾಯಲ್ಲಿ ಬರ್ತಿದ್ದ ಸಂಭಾಷಣೆ, ಕನ್ನಡ. ಆ ಮಟ್ಟಕ್ಕೆ ಗಣೇಶ್ ಭಾಷೆಯ ಮೇಲಿನ ಹಿಡಿತದಿಂದ ಚೆನ್ನಾಗಿ ಮಾಡಿದ್ದಾನೆ ಎನ್ನುವುದು ನನ್ನ ಅಭಿಪ್ರಾಯ” ಎಂದು ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.
ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅಭಿಪ್ರಾಯ ಕೆಲವರಿಗೆ ಬೇಸರ ತಂದಿದೆ. ಯಾವುದೇ ಚಿತ್ರವನ್ನು ಅಣ್ಣಾವ್ರ ‘ಮಯೂರ’ ಚಿತ್ರಕ್ಕೆ ಹೋಲಿಸಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅದು ಮಾಸ್ಟರ್ ಪೀಸ್ ಸಿನಿಮಾ. ಅದರ ಹತ್ತಿರಕ್ಕೆ ಸುಳಿಯುವಂತಹ ಸಿನಿಮಾ ಇನ್ನು ಬಂದಿಲ್ಲ. ಬರುವುದು ಇಲ್ಲ ಎಂದು ಹೇಳುತ್ತಿದ್ದಾರೆ.