ಕೆ.ಎಸ್.ಸಿ.ಎ ಅನ್ನು ಕಲ್ತುಳಿತ ಪ್ರಕರಣಕ್ಕೆ ಹೊಣೆ ಮಾಡಿದ ಸರ್ಕಾರ !

ಕೆ.ಎಸ್.ಸಿ.ಎ ಅನ್ನು ಕಲ್ತುಳಿತ ಪ್ರಕರಣಕ್ಕೆ ಹೊಣೆ ಮಾಡಿದ ಸರ್ಕಾರ !

Kannada Nadu
ಕೆ.ಎಸ್.ಸಿ.ಎ ಅನ್ನು ಕಲ್ತುಳಿತ  ಪ್ರಕರಣಕ್ಕೆ ಹೊಣೆ ಮಾಡಿದ ಸರ್ಕಾರ !
Karnataka Chief Minister Siddaramaiah with Deputy Chief Minister D.K. Shivakumar addresses a press conference regarding the stampede incident on Wednesday | PTI

ಬೆಂಗಳೂರು, ಜೂ, 5; ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ ವಿಜಯೋತ್ಸವ ಮಾರಣಹೋಮವಾಗಿ ಪರಿವರ್ತನೆಯಾದ ಘಟನೆಯ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಘಟನೆಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕಾರಣ ಎನ್ನುವ ನಿಲುವಿಗೆ ರಾಜ್ಯ ಸರ್ಕಾರ ಬಂದಿದೆ. ಈ ದುರಂತದಲ್ಲಿ ಭದ್ರತಾ ವೈಫಲ್ಯವಾಗಿಲ್ಲ ಎಂದು ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ.

ರಾಜ್ಯ ಸಚಿವ ಸಂಪುಟ ಸಭೆಯ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಅಭಿನಂದನಾ ಸಮಾರಂಭ ಸುಸೂತ್ರವಾಗಿ ನಡೆದಿದೆ. ಆದರೆ ಕೆ.ಎಸ್.ಸಿ.ಎನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟು, 47 ಜನ ಗಾಯಗೊಂಡಿದ್ದಾರೆ. ಕ್ರೀಡಾಂಗಣಕ್ಕೆ ಸಣ್ಣ ಗೇಟುಗಳಿವೆ. ಜನ ಗೇಟುಗಳ ಮೂಲಕ ಪ್ರವೇಶಿಸಲು ಸಾಧ್ಯವಾಗಿಲ್ಲ. ಹಾಗಾಗಿ ಗೇಟುಗಳನ್ನು ಒಡೆದು ಒಳ ನುಗ್ಗಿದ್ದಾರೆ. ಇದರಿಂದ ಕಾಲ್ತುಳಿತ ಸಂಭವಿಸಿದೆ. ಇಂತಹ ಘಟನೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದರು.

ಸಂಭ್ರಮಾಚರಣೆ ಮಾಡಲು ಬುಧವಾರ ಬೆಳಿಗ್ಗೆ ಕ್ರಿಕೆಟ್ ಅಸೋಸಿಯೇಷನ್ ಸರ್ಕಾರಕ್ಕೆ ತಿಳಿಸಿತ್ತು. ಕ್ರೀಡಾಂಗಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಜನ ಬರಬಹುದು. ಇನ್ನೂ ಸ್ವಲ್ಪ ಹೆಚ್ಚು ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಹೆಚ್ಚು ಜನ ಯುವ ಜನರೇ ಸತ್ತಿದ್ದಾರೆ. ಈ ಬಗ್ಗೆ 15 ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕ್ರಿಕೆಟ್ ಗೆ ಸಂಬಂಧಿಸಿದಂತೆ ಪೊಲೀಸ್ ಭದ್ರತೆ ಒದಗಿಸುವುದು ನಮ್ಮ ಕೆಲಸ. ಉಳಿದ ನಿರ್ವಹಣೆ ಕೆ.ಎಸ್.ಸಿ.ಎಗೆ ಸಂಬಂಧಪಡುತ್ತದೆ. ಕಾರ್ಯಕ್ರಮಕ್ಕೆ ನಾವು ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದೇವು. ಹಿಂದೆಯೂ ಪೊಲೀಸರು ಕಾರ್ಯನಿರ್ವಹಿಸಿದ್ದರು. ಆದರೆ ಆಗ ಯಾವುದೇ ಲೋಪವಾಗಿಲ್ಲ. ನಾವು ಸಂತ್ರಸ್ತರ ಪರ ಇದ್ದೇವೆ ಎಂದರು.

ಈ ದುರಂತದಲ್ಲಿ ಭದ್ರತಾ ವೈಫಲ್ಯವಾಗಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಕ್ರೀಡಾಂಗಣಕ್ಕೆ ಅನಿರೀಕ್ಷಿತವಾಗಿ 2 ರಿಂದ 3 ಲಕ್ಷ ಜನ ಆಗಮಿಸಿದ ಕಾರಣ ಇಂತಹ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ರಾಜಕೀಯ ಮಾಡಲು ಬಯಸುವುದಿಲ್ಲ. ಭದ್ರತಾ ವೈಫಲ್ಯ, ಇನ್ನಿತರ ವೈಫಲ್ಯಗಳಿದ್ದರೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಈ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಮಾಡಬಾರದು ಎಂದು ಯಾವ ಅಧಿಕಾರಿಗಳು ಹೇಳಿಲ್ಲ. ವಿಧಾನಸೌಧದ ಮುಂದೆ ಯಾವುದೇ ಅವಘಡ ನಡೆದಿಲ್ಲ. ಕ್ರಿಕೆಟ್ ಸ್ಟೇಡಿಯಂನ ಕಾರ್ಯಕ್ರಮದ ಬಗ್ಗೆ ತಮಗೆ ಗೊತ್ತಿಲ್ಲ. ತಾವು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿಲ್ಲ. ನನಗೆ ಗೊತ್ತಿರುವಂತೆ ವಿಧಾನಸೌಧದ ಮುಂದೆ ಯಾವುದೇ ಅವಘಢ ಸಂಭವಿಸಿಲ್ಲ. ಕುಂಭ ಮೇಳದಲ್ಲಿ 50 ರಿಂದ 60 ಜನ ಸತ್ತಿದ್ದರು. ಆಗ ನಾನು ಟೀಕೆ ಮಾಡಿರಲಿಲ್ಲ. ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಹೇಳಿದರು.

ವಿಜಯೋತ್ಸವ ಆಚರಣೆ ಕೆ.ಎಸ್.ಸಿ.ಎಗೆ ಸಂಬಂಧಪಡುವ ಕಾರ್ಯಕ್ರಮ. ಘಟನೆಯಲ್ಲಿ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ವಾನ ಹೇಳಿದ್ದೇವೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಸರ್ಕಾರ ಇದಕ್ಕಾಗಿ ಸರ್ಕಾರ ದುಃಖ ವ್ಯಕ್ತಪಡಿಸುತ್ತದೆ.. ವಿಧಾನಸೌಧ ಎದುರು ಒಂದು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ವಿಧಾನಸೌಧದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ದುರಂತ ಸಂಭವಿಸಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕ್ರಿಕೆಟ್ ಕ್ರೀಡಾಂಗಣದಲ್ಲಿ 35 ಸಾವಿರ ಜನರಿಗೆ ಆಸನ ವ್ಯವಸ್ಥೆಯಿದೆ. ಆದರೆ 2 ರಿಂದ 3 ಲಕ್ಷ ಜನ ಸೇರಿದ್ದಾರೆ. ಸತ್ತವರಿಗೆ 10 ಲಕ್ಷ ರೂ, ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆಗೆ ಸೂಚಿಸಲಾಗಿದೆ. ಕೆಲವರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಗಾಯಗೊಂಡಿರುವವರು ಅಪಾಯದಿಂದ ಪಾರಾಗಾಗಿದ್ದಾರೆ. ಗಾಯಗೊಂಡಿರುವವರಿಗೆ ಊಟದ ವ್ಯವಸ್ಥೆ, ವಾಹನ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರಾಣ ಕಳೆದುಕೊಂಡಿರುವವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಈ ಘಟನೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಸಂಪುಟ ಸದಸ್ಯರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಆರ್.ಸಿ.ಬಿ ಫ್ರಾಂಚೈಸಿ ಹೊತ್ತಿರುವ ಕೆ.ಎಸ್.ಸಿ.ಎ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ದುರಂತದ ಬಗ್ಗೆ ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಇದಕ್ಕೂ ಮುನ್ನ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಿಐಡಿ ತನಿಖೆಗೆ ಪ್ರಕರಣವನ್ನು ವಹಿಸಿಲ್ಲ. ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದ ಬಗ್ಗೆ ಸಂಪುಟ ಸಭೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ದುರ್ಘಟನೆ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಈ ತನಿಖೆಯಿಂದ ನಿಖರವಾದ ಮಾಹಿತಿ ತಿಳಿಯಲು ಸಾಧ್ಯವಿದೆ. ಸಿಐಡಿಗೆ ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂತು. ಹೀಗಾಗಿ ಸಿಐಡಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಘಟನೆ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಸಿಐಡಿ ತನಿಖೆ ಸೂಕ್ತ ಎನ್ನುವ ನಿಲುವಿಗೆ ರಾಜ್ಯ ಸರ್ಕಾರ ಬಂದಿದೆ.

ಕೆ.ಎಸ್.ಸಿ.ಎ ಮತ್ತು ಐಪಿಎಲ್ ಪ್ರಾಂಚೈಸಿಗಳು ವಿಜಯೋತ್ಸವ ಆಚರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ 11 ಜನ ಮರಣ ಹೊಂದಿದ್ದು, 56 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

$$

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ: ಆರ್.ಸಿ.ಬಿ ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಎಫ್ಐಆರ್

ಬೆಂಗಳೂರು, ಜೂ.5: ರಾಯಲ್ ಚಾಲೆಂಜರ್ಸ್ ಬೆಂಗಳೂರು 2025ರ ಐಪಿಎಲ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಖುಷಿಯಲ್ಲಿ ಆರ್ ಸಿಬಿ ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡಿದೆ.

ದರೆ ಈ ಸಂಭ್ರಮಾಚರಣೆಯಲ್ಲಿ 11 ಆರ್ ಸಿಬಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಈ ಸಂಬಂಧ ಆರ್ ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಮೊದಲು ಘಟನೆ ಸಂಬಂಧ ಯುಡಿಆರ್ ದಾಖಲಾಗಿದ್ದಕ್ಕೆ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಡಿಎನ್‌ಎ ಇವೆಂಟ್‌ ಮ್ಯಾನೇಜ್‌ಮೆಂಟ್‌, ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌) ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಬಿಎನ್‌ಎಸ್‌ ಸೆಕ್ಷನ್ 105, 115, 118ರಡಿ ಮೊಕದ್ದಮೆ ದಾಖಲಾಗಿದ್ದು, ಎ1 ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಎ2 ಡಿಎನ್‌ಎ ಇವೆಂಟ್‌ ಮ್ಯಾನೇಜ್‌ಮೆಂಟ್‌ ಆಗಿದ್ದರೆ ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌)3ನೇ ಆರೋಪಿಯನ್ನಾಗಿ ಮಾಡಲಾಗಿದೆ.

ಆರ್ ಸಿಬಿ ಸಂಭ್ರಮಾಚರಣೆ ವೇಲೆ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿರುವ ಸಂಬಂಧ ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ಯುಡಿಆರ್ ದಾಖಲಿಸಿದ್ದ ಬಗ್ಗೆ ಬೆಳಗ್ಗೆಯಿಂದ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ 24 ಗಂಟೆ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಯಾವ ಸೆಕ್ಷನ್‌ ಗೆ ಏನು ಶಿಕ್ಷೆ?

ಸೆಕ್ಷನ್‌ 105-ಕೊಲೆಯ ಉದ್ದೇಶವಿಲ್ಲದೇ ವ್ಯಕ್ತಿಯ ಸಾವಿಗೆ ಕಾರಣವಾಗುವುದು ಕನಿಷ್ಠ 5 ವರ್ಷದಿಂದ 10 ವರ್ಷಗಳವರೆಗೂ ಶಿಕ್ಷೆಗೆ ಅವಕಾಶವಿದೆ.

ಸೆಕ್ಷನ್‌ 115(2)-ಮತ್ತೊಬ್ಬ ವ್ಯಕ್ತಿಗೆ ಗಾಯವನ್ನುಂಟುಮಾಡುವುದು, 1 ವರ್ಷದವರೆಗೆ ಶಿಕ್ಷೆ

ಸೆಕ್ಷನ್‌ 118(1)-ಸಮಾನ ಉದ್ದೇಶದಿಂದ ವಸ್ತುವಿನ ಸಹಾಯದಿಂದ ತೀವ್ರ ಗಾಯ ಮಾಡುವುದು

ಸೆಕ್ಷನ್‌ 118(2)-ಒಂದು ವರ್ಷದಿಂದ 10 ವರ್ಷಗಳವರೆಗೂ ಶಿಕ್ಷೆ

ಸೆಕ್ಷನ್‌ 190-ಅಕ್ರಮ ಗುಂಪುಗೂಡಿದ ಸದಸ್ಯರಿಂದ ಆದ ಕೃತ್ಯಕ್ಕೆ ಗುಂಪಿನ ಎಲ್ಲರೂ ಹೊಣೆ

ಸೆಕ್ಷನ್‌ 132-ಸರ್ಕಾರದ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು, 2 ವರ್ಷಗಳವರೆಗೂ ಶಿಕ್ಷೆ

ಸೆಕ್ಷನ್‌ 125(a) (b)-ಇತರರ ಜೀವಕ್ಕೆ ಹಾನಿಯಾಗುವ ಕೃತ್ಯವೆಸಗುವುದು ಇದಕ್ಕೆ 6 ತಿಂಗಳಿನಿಂದ 3 ವರ್ಷಗಳವರೆಗೂ ಶಿಕ್ಷೆಯಾಗುತ್ತೆ

ಬೆಂಗಳೂರು ಕಾಲ್ತುಳಿತ ದುರಂತ ಸದ್ಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರ ಈ ಘಟನೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಿದೆ. ಈ ಮಧ್ಯೆ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೂಡ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಎಸ್ ಸಿಎ ವಿರುದ್ಧ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡಿದ್ದು, ಘಟನೆ ಸಂಬಂಧ ಸಂಪೂರ್ಣ ವರದಿ ನೀಡುವಂತೆ ರಾಜ್ಯಸರ್ಕಾರಕ್ಕೆ ಸೂಚನೆ ನೀಡಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";