ಬೆಂಗಳೂರು: ಪ್ರಧಾನಿ ಮೋದಿ ಅವರು ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿರುವುದರಿಂದ ಪ್ರಜ್ವಲ್ ರವರ ಲೈಂಗಿಕ ಹಗರಣದ ಬಗ್ಗೆ ಮೋದಿ ಅವರನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಲಬುರುಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಮ ಅವರ ಕೈ ಹಿಡಿದು ಮತ ಹಾಕುವಂತೆ ಕೋರಿದ್ದರು .ಹಾಗಾಗಿ ನಾವು ಪೆನ್ಡ್ರೈವ್ ವಿಚಾರದಲ್ಲಿ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ ಅಷ್ಟೇ ಎಂದರು.
ಪ್ರೆನ್ಡ್ರೈವ್ ವಿಚಾರದಲ್ಲಿ ಪ್ರಧಾನಿಗಳನ್ನು ಯಾಕೆ ಎಳೆದು ತರುತ್ತಿರಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ರೇವಣ್ಣ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಮೋದಿ ಅವರೇ ಪ್ರಚಾರ ಮಾಡಿದ್ದಾರೆ. ಹೀಗಾಗಿ ಪ್ರಶ್ನೆ ಮಾಡುವುದು ತಪ್ಪಲ್ಲ. ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದೆಲ್ಲಾ ಹಿಂದೆ ಬೊಬ್ಬೆ ಹಾಕಿದ್ದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖಂಡರಾದ ಸಿ.ಟಿ. ರವಿ, ಸುನೀಲ್ ವಿಪಕ್ಷ ನಾಯಕ ಆರ್. ಅಶೋಕ್ ಅವರೆಲ್ಲಾ ಈಗ ಪ್ರಜ್ವಲ್ ರೇವಣ್ಣ ಅವರಿಂದ ಅನ್ಯಾಯಕ್ಕೊಳಗಾಗಿ ಸಂತ್ರಸ್ತ ಮಹಿಳೆಯರ ಮನೆಗೆ ಹೋಗಿ ಧೈರ್ಯ ತುಂಬಬೇಕು. ಯಾಕೆ ಅವರನ್ನು ಇವರ್ಯಾರು ಭೇಟಿ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮಹಿಳೆಯ ಪರ ನಿಜವಾದ ಕಾಳಜಿ ಇದ್ದರೆ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸಂತ್ರಸ್ತೆ ಮನೆಗೆ ಹೋಗಿ ಧೈರ್ಯ ಹೇಳಲಿ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್, ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲದಿಂದ ಗೆದ್ದ ಸಂಸದ ಎಂದಿದ್ದಾರೆ. ಹೌದು ಹಿಂದಿನ ಚುನಾವಣೆಯಲ್ಲಿ ಅವರು ನಮ್ಮ ಬೆಂಬಲದಿಂದ ಗೆದ್ದಿದ್ದರು. ಹೀಗಾಗಿ ನಾವು ಅವರನ್ನು ಪ್ರಶ್ನೆ ಮಾಡಿದ್ದೇವೆ. ಈಗ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ ಪ್ರಶ್ನೆ ಮಾಡಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ರೇವಣ್ಣ ಆವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರನ್ನು ಮಲೇಷಿಯಾದಲ್ಲಿ ಇಟ್ಟವರು ಯಾರು, ಎಲ್ಲವೂ ಬ್ರದರ್ಸ್ ಆಟ ಎಂಬ ಕುಮಾರಸ್ವಾಮಿ ಅವರ ಆರೋಪದ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಹೀಗಂತ ನಮ್ಮ ಬ್ರದರ್ ಹೇಳಿದ್ದಾರೆ. ಹಾಗಿದ್ದರೆ ಅವರಿಗೆ ಎಲ್ಲ ವಿಚಾರ ಗೊತ್ತಿರಬೇಕಲ್ಲ. ಕೇಂದ್ರ ಸರ್ಕಾರಕ್ಕೆ ಯಾರು ಯಾರನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂಬ ಮಾಹಿತಿ ಪಡೆಯಲಿ. ನಾನು ಕಾರ್ತಿಕ್ ಅವರನ್ನು ವಿದೇಶಕ್ಕೆ ಕಳುಹಿಸಿಲ್ಲ. ವಿದೇಶಕ್ಕೆ ಕಳುಹಿಸಲು ನನಗೆ ತಲೆ ಕೆಟ್ಟಿದೆಯೇ ನಾನು ನೇರವಾಗಿ ಹೋರಾಟ ಮಾಡುತ್ತೇನೆ. ಯಾರನ್ನೂ ಬಚ್ಚಿಟ್ಟು ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪೆನ್ಡ್ರೈವ್ ಯಾರು ಬಿಟ್ಟಿದ್ದಾರೆ ಎಂಬ ಮುಂದೆ ಚರ್ಚೆ ಮಾಡೋಣ. ಬಿಜೆಪಿ ನಾಯಕರಿಗೆ ಪೆನ್ಡ್ರೈವ್ ನೀಡಿರುವುದಾಗಿ ಕಾರ್ತಿಕೇ ಹೇಳಿದ್ದಾನೆ. ಹಾಗೆಯೇ ಹಾಸನದ ವಕೀಲ ದೇವರಾಜೇಗೌಡ ನನಗೆ ಕುಮಾರಣ್ಣ ಹಾಗೂ ದೇವೇಗೌಡರ ಮೇಲೆ ಅಭಿಮಾನ ಇದೆ. ಅವರನ್ನೂ ಭೇಟಿ ಮಾಡಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಇವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.