ತೆಲಂಗಾಣ/ಕೊಲ್ಲಾಪುರ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು, ತೆಲಂಗಾಣ ರಾಜ್ಯ ಕಾಂಗ್ರೆಸ್ ಪಕ್ಷ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು ಅವರು ಮತದಾರರಲ್ಲಿ ಮನವಿ ಮಾಡಿದರು.
ತೆಲಂಗಾಣದ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಸೋಮವಾರ ಬೆಳಿಗ್ಗೆ ಕೊಲ್ಲಾಪುರ ನಗರದ ವಿವಿಧ ವಾರ್ಡ್ ಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಜೂಪಲ್ಲಿ ಕೃಷ್ಣಾರಾವ್ ಅವರ ಪರ ಮತಯಾಚಿಸಿದರು.

ತೆಲಂಗಾಣದಲ್ಲಿ ಎರಡು ಅವಧಿಗೆ ಆಯ್ಕೆಯಾದ ಬಿಆರೆಸ್ ಪಕ್ಷ ಜನರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ, ಉದ್ಯೋಗ ಸಿಗದೆ ಯುವಜನರು ಕಂಗಾಲಾಗಿದ್ದಾರೆ, ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಕೆಸಿಆರ್ ವಿಫಲರಾಗಿದ್ದು, ಕೊಲ್ಲಾಪುರದ ಮತದಾರರು ಹಿರಿಯ, ಅನುಭವಿ ಜೂಪಲ್ಲಿ ಕೃಷ್ಣಾರಾವ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪಕ್ಷ ಭರವಸೆ ನೀಡಿರುವಂತೆ ರೈತು ಭರೋಸಾ, ಮಹಾಲಕ್ಷ್ಮಿ (ಗೃಹಿಣಿಯರಿಗೆ 2,500 ರೂ. ಸಹಾಯಧನ, 500 ರೂ. ಅಡುಗೆ ಅನಿಲಕ್ಕಾಗಿ), ಗೃಹಜ್ಯೋತಿ(200 ಯುನಿಟ್ ಉಚಿತ ವಿದ್ಯುತ್), ಇಂದ್ರಮ್ಮ ಇಲ್ಲು (ವಸತಿ ಯೋಜನೆ), ಯುವ ವಿಕಾಸಂ (ವಿದ್ಯಾರ್ಥಿಗಳಿಗೆ 5 ಲಕ್ಷ ರೂ.ವರೆಗೆ ಸಹಾಯಧನ), ಚೇಯೂತ (ಹಿರಿಯ ನಾಗರಿಕರು, ವಿಧವೆಯರು, ನೇಕಾರರು ಸೇರಿದಂತೆ ವಿವಿಧ ದುರ್ಬಲ ವರ್ಗದವರಿಗೆ ಮಾಸಿಕ 4,000 ರೂ. ಮಾಸಾಶನ) ನೀಡುವ ಈ ಗ್ಯಾರಂಟಿಗಳು ತೆಲಂಗಾಣದ ಜನರ ಜೀವನವನ್ನು ಬದಲಿಸಲಿವೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಈಡೇರಿಸಿದೆ, ಇನ್ನೂ ಒಂದು ಗ್ಯಾರಂಟಿ ಈಡೇರಿಸುವುದು ಬಾಕಿ ಇದೆ. ಅದನ್ನೂ ಕೂಡ ನಮ್ಮ ಸರ್ಕಾರ ಶೀಘ್ರ ಈಡೇರಿಸಲಿದೆ. ಅದೇ ರೀತಿ ತೆಲಂಗಾಣದಲ್ಲೂ ಕೂಡ ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷ ಬದ್ಧತೆ ತೋರಲಿದೆ ಎಂದರು