ಕೊಪ್ಪಳ: ತುಂಗಭದ್ರಾ ನದಿಯ ದಡದಲ್ಲಿ ಭಕ್ತರ ಸಂಭ್ರಮ, ಹೂರಣದ ಹೋಳಿಗೆಯ ಘಮಘಮ ವಾಸನೆ, “ಉಧೋ ಉಧೋ ಹುಲಿಗೆಮ್ಮ” ಎನ್ನುವ ಜಯಘೋಷಗಳಿಂದ ಹುಲಿಗಿ ದೇವಸ್ಥಾನ ಸನ್ನಿಧಿ ಸೋಮವಾರ ರಾತ್ರಿ ಭಕ್ತಿಸಾಗರವಾಗಿ ಮಾರ್ಪಟ್ಟಿತ್ತು.
ದೇವಿಯ ವಾರವಾದ ಮಂಗಳವಾರದ ಮಹಾರಥೋತ್ಸವದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು. ದೇವಿಯ ದರ್ಶನಕ್ಕಾಗಿ ಕಣ್ಣು ಹಾಯಿಸಿದಷ್ಟು ದೂರ ಭಕ್ತರ ಸಾಲು ಕಂಡುಬರುತ್ತಿತ್ತು.
ಮಹಾರಥೋತ್ಸವಕ್ಕೆ ಒಂದು ದಿನ ಮುಂಚೆಯೇ ಬಂದಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಮಿಂದು ದೇವಿಯ ದರ್ಶನ ಪಡೆದು, ತೇರು ಪಾದಗಟ್ಟಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ನೂರಾರು ಟೆಂಟ್ಗಳಲ್ಲಿ ತಂಗಿದ್ದ ಕುಟುಂಬಗಳು ದೇವಿಯನ್ನು ಸ್ಮರಿಸುವ ಭಕ್ತಿಗೀತೆಗಳನ್ನು ಹಾಡುತ್ತ ಅನ್ನ, ಸಾರು, ಬದನೇಕಾಯಿ ಪಲ್ಯ ಹಾಗೂ ಹೋಳಿಗೆ ತಯಾರಿಸಿ ದೇವಿಗೆ ನೈವೇದ್ಯ ಸಮರ್ಪಿಸಿ ಬಳಿಕ ಪ್ರಸಾದವಾಗಿ ಸೇವಿಸಿದರು.
ಹಲವು ಬಣ್ಣಗಳ ಹೂಗಳಿಂದ ಅಲಂಕಾರಗೊAಡಿದ್ದ ಮಹಾರಥಕ್ಕೆ ಕೇಸರಿ ಧ್ವಜ ಕಟ್ಟಲಾಗಿತ್ತು. ಅರ್ಚಕರು ರಥಾಂಗ ಹೋಮ ನೆರವೇರಿಸಿ ದೇವಸ್ಥಾನದ ಮೂರ್ತಿಯನ್ನು ಸಂಪ್ರದಾಯಬದ್ಧ ಪೂಜೆಯೊಂದಿಗೆ ತೇರಿಗೆ ಕರೆತಂದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ಭಕ್ತರ ಕುಣಿತ ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಹುಲಿಗೆಮ್ಮ ದೇವಿ ಜಾತ್ರೆಯ ವಿಶೇಷವೆಂದರೆ ಕಂಕಣ ಧಾರಣೆಯಿಂದ ಹಿಡಿದು ಕಂಕಣ ವಿಸರ್ಜನೆವರೆಗೆ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಸಾಂಪ್ರದಾಯಿಕ ಪೂಜಾರಿ ಮನೆತನಗಳಾದ ಪಾಯಸದವರು, ಬಾಳೆ ದಂಡಿಯವರು ಹಾಗೂ ಬಾಬುದಾರರು ಪ್ರಮುಖ ಪಾತ್ರವಹಿಸುವುದು.
ಜಾತ್ರೆಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಅತಿಕ್ರಮಣ ತೆರವಿನಿಂದ ಭಕ್ತರಿಗೆ ಅನುಕೂಲ
ಹುಲಿಗಿ ಕ್ಷೇತ್ರಕ್ಕೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲಕ್ಷಾಂತರ ಭಕ್ತರು ಭೇಟಿ ನೀಡುವುದು ಸಾಮಾನ್ಯ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದೇವಸ್ಥಾನದ ಮುಂಭಾಗದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿತ್ತು.
ರಸ್ತೆ ಮೇಲೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಈ ಬಾರಿಯ ಜಾತ್ರೆಯಲ್ಲಿ ಭಕ್ತರಿಗೆ ಸುಗಮ ಸಂಚಾರ ಸಾಧ್ಯವಾಯಿತು.



