ಬೆಂಗಳೂರು: ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಇದೀಗ ಬಹಿರಂಗ ಸಂಘರ್ಷವಾಗಿ ಮಾರ್ಪಟ್ಟಿದ್ದು ಉಭಯ ನಾಯಕರು ವಿದ್ಯುಕ್ತವಾಗಿ ರಣಾಂಗಣ ಪ್ರವೇಶಿಸಿದ್ದಾರೆ.
ಮೇ ಒಂಭತ್ತರಂದು ತಮ್ಮ ಅನುಮತಿಯಿಲ್ಲದೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರುಗಳನ್ನು ವರ್ಗಾವಣೆ ಮಾಡಿದ್ದು ಇದನ್ನು ತಕ್ಷಣ ವಾಪಸ್ಸು ಪಡೆಯಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರವೇ ಉಭಯ ನಾಯಕರ ನಡುವಣ ಬಹಿರಂಗ ಸಂಘರ್ಷದ ಮೂಲ.
ತಮ್ಮ ಪೂರ್ವಾನುಮತಿ ಪಡೆದು ತಮ್ಮ ಇಲಾಖೆಯ ಉನ್ನತಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಸರ್ಕಾರ ಅಧಿಕಾರಕ್ಕೆ ಬಂದ ಕಾಲದಲ್ಲಿಯೇ ನಿಮಗೆ ತಿಳಿಸಲಾಗಿತ್ತು ಎಂದು ಡಿಕೆಶಿ ಮೇ 13 ರಂದು ಬರೆದ ಪತ್ರ ಸಾರ್ವಜನಿಕವಾಗಿ ಬಹಿರಂಗವಾಗುವ ಮುನ್ನವೇ ಸಿಎಂ ಸಿದ್ಧರಾಮಯ್ಯ ಅವರಿಗೆ ಪಂಥಾಹ್ವಾನದಂತೆ ಕಾಣಿಸಿತ್ತು.
ಈ ಹಿನ್ನೆಲೆಯಲ್ಲಿಯೇ ಡಿಕೆಶಿಗೆ ತಿರುಗೇಟು ನೀಡಲು ಸಿದ್ದರಾದ ಸಿದ್ಧರಾಮಯ್ಯ ಬೆಂಗಳೂರು ನಗರ ಸಂಚಾರ ಕಾರ್ಯಕ್ರಮವನ್ನು ಇದಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಭಾರೀ ಮಳೆಯಿಂದ ತತ್ತರಿಸಿದ ಬೆಂಗಳೂರು ನಗರವನ್ನು ವೀಕ್ಷಿಸಲು ಮೇ ತಿಂಗಳ ಮೂರನೇ ವಾರ ಸಜ್ಜಾದ ಸಿದ್ದರಾಮಯ್ಯ ಅವರು ಡಿಕೆಶಿಯನ್ನು ನಿರ್ಲಕ್ಷಿಸಲು ತೀರ್ಮಾನಿಸಿದ್ದರು.ಇದಕ್ಕಾಗಿ ಡಿಕೆಶಿ ಹೊಸಪೇಟೆ ಪ್ರವಾಸದಲ್ಲಿದ್ದ ದಿನವನ್ನು ಆಯ್ದುಕೊಂಡ ಅವರು ನಗರ ಸಂಚಾರ ಕಾರ್ಯವನ್ನು ಡಿಕೆಶಿ ಗೈರು ಹಾಜರಿಯಲ್ಲಿ ನಡೆಸಲು ಸಜ್ಜಾದರು.
ಅಂದ ಹಾಗೆ ಡಿಕೆಶಿ ಅವರು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಹೊಂದಿದ್ದರಾದರೂ ಅವರಿಗೆ ಸೂಚನೆ ನೀಡದೆ ಕಾರ್ಯಕ್ರಮವನ್ನು ನಿಗದಿಗೊಳಿಸಿದ್ದರು. ಅದರೆ ಪ್ರವಾಸದಲ್ಲಿದ್ದ ಡಿಕೆಶಿ ಈ ವಿಷಯ ತಿಳಿಯುತ್ತಲೇ ಹೊಸಪೇಟೆಯ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಹಿಂತಿರುಗಿದರು.ಅದರೆ ಅವರು ವಾಪಸ್ಸಾಗಿ ಬೆಂಗಳೂರು ನಗರದ ಮಳೆ ಪೀಡಿತ ಪ್ರದೇಶಗಳನ್ನು ನೋಡಲು ಸಜ್ಜಾಗುತ್ತಿದ್ದಂತೆಯೇ ಕಾರ್ಯಕ್ರಮವನ್ನು ಮುಂದೂಡಿದ ಸಿದ್ದರಾಮಯ್ಯಈಗ ಬಸ್ಸಿನಲ್ಲಿ ನಗರ ವೀಕ್ಷಿಸಲು ಮುಂದಾದರೆ ಟ್ರಾಫಿಕ್ ಜಾಮ್ ನಿಂದ ಜನರಿಗೆ ತೊಂದರೆಯಾಗುತ್ತಿದೆ ಅಂತ ಹೇಳಿ,ಅಂದಿನ ಕಾರ್ಯಕ್ರಮವನ್ನು ಬಿಬಿಎಂಪಿಯ ವಾರ್ ರೂಂ ಭೇಟಿಗೆ ಸೀಮಿತಗೊಳಿಸಿದರು. ಹೀಗೆ ಕಾರ್ಯಕ್ರಮ ಬದಲಾಗಿದ್ದರಿಂದ ವಿಧಿಯಿಲ್ಲದೆ ಬಿಬಿಎಂಪಿ ವಾರ್ ರೂಮಿಗೆ ಹೋದ ಡಿಕೆಶಿಗೆ ಅಲ್ಲಿಯೂ ಮುಜುಗರ ಕಾದಿತ್ತು.ಯಾಕೆಂದರೆ ಮಳೆಯಿಂದ ತತ್ತರಿಸಿದ ಪ್ರದೇಶಗಳಲ್ಲಿ ಹೇಗೆ ಪರಿಹಾರ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಸಿದ್ಧರಾಮಯ್ಯ ಅವರು ತಪ್ಪಿಯೂ ಉಸ್ತುವಾರಿ ಸಚಿವರಾದ ಡಿಕೆಶಿ ಅವರಿಗೆ ಮಾತನಾಡಲು ಬಿಡಲಿಲ್ಲ.
ಇದರಿಂದ ಕೆರಳಿದ ಡಿಕೆಶಿ ಪಕ್ಷದ ವರಿಷ್ಟರಿಗೆ ದೂರು ನೀಡಿದ್ದಲ್ಲದೆ,ಇದರ ವಿರುದ್ದ ತಿರುಗಿ ಬೀಳುವುದಾಗಿ ಎಚ್ಚರಿಸಿದರು ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ.ಇದೇ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ವಿರುದ್ದ ತಿರುಗಿ ಬೀಳಲು ನಿರ್ಧರಿಸಿದ ಡಿಕೆಶಿ ಸದ್ಯದಲ್ಲೇ ತಮ್ಮ ಬೆಂಬಲಿಗ ಶಾಸಕರು ಸಭೆ ಸೇರುವಂತೆ ಸೂಚಿಸಿದ್ದರು.ಅಷ್ಟೇ ಅಲ್ಲದೆ,ನಿಗದಿತ ಕಾಲದಲ್ಲಿ ಅಧಿಕಾರ ಹಸ್ತಾಂತರ ಕಾರ್ಯ ನಡೆಯುವ ಬಗ್ಗೆ ತಮಗೆ ಸ್ಪಷ್ಟತೆ ಬೇಕು.ಇಲ್ಲದಿದ್ದರೆ ತಮ್ಮ ದಾರಿ ತಮಗೆ ಎಂದು ವರಿಷ್ಟರಿಗೆ ಎಚ್ಚರಿಸಿದ್ದರೆನ್ನಲಾಗಿದೆ.
ಯಾವಾಗ ಈ ಬೆಳವಣಿಗೆ ನಡೆಯಿತೋ ಆಗ ಧಿಡೀರನೆ ರಾಜ್ಯಕ್ಕೆ ಆಗಮಿಸಿದ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಉಭಯ ನಾಯಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದರು.ಈ ಸಂದರ್ಭದಲ್ಲಿ ಡಿಕೆಶಿ ನಿಗದಿತ ಕಾಲದಲ್ಲಿ ತಮಗೆ ಸಿಎಂ ಹುದ್ದೆ ದೊರಕಲೇಬೇಕು ಎಂದರಾದರೆ,ಸಿಎಂ ಸಿದ್ಧರಾಮಯ್ಯ ಮಾತ್ರ ಬಿಲ್ ಕುಲ್ ಅಧಿಕಾರ ಬಿಟ್ಟು ಕೊಡಲಾರೆ.ಹಾಗೇನಾದರೂ ಮಾಡಿದರೆ ಸರ್ಕಾರ ಉರುಳುತ್ತದೆ ಎಂದು ವಿವರಿಸಿದ್ದಾರೆ. ಇದಾದ ನಂತರ ಉಭಯ ನಾಯಕರು ತಮ್ಮ ತಮ್ಮ ಬಣವನ್ನು ಮುಂದಿನ ಹೋರಾಟಕ್ಕೆ ಅಣಿಗೊಳಿಸತೊಡಗಿದ್ದಾರೆ ಎಂಬುದು ಕೈ ಪಾಳಯದ ಮಾತು.
ಈ ಮಧ್ಯೆ ಸೋನಿಯಾಗಾಂಧಿ ಅವರಿಗೆ ಪರಮಾಪ್ತರಾದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಇಂದು ಧಿಡೀರ್ ಭೇಟಿ ಮಾಡಿದ ಸಿದ್ದರಾಮಯ್ಯ ಹಲವು ವಿಷಯಗಳ ಕುರಿತು ಚರ್ಚಿಸಿದ್ದು,ಇದು ಕೂಡಾ ಡಿಕೆಶಿ ಅವರನ್ನು ದುರ್ಬಲಗೊಳಿಸುವ ತಂತ್ರ ಎಂದು ರಾಜಕೀಯ ವಲಯಗಳು ಬಣ್ಣಿಸುತ್ತಿವೆ.