ದೇವನಹಳ್ಳಿ,ಜ,2 : ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಕಳೆದ 40 ವರ್ಷಗಳಿಂದ ಮೀಸಲು ಕ್ಷೇತ್ರವಾಗಿದ್ದು, ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಪರಿಶಿಷ್ಟ ಜಾತಿಗೆ ಅವಕಾಶವಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಪ್ರಸ್ತುತ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆ ಕರೆದು ವರ್ಷ ಕಳೆದಿದೆ, ಮೂರು ತಿಂಗಳಿಗೊಮ್ಮೆ ಕರೆಯಬೇಕಿದ್ದ ಸಭೆ ಒಂದು ವರ್ಷವಾದರೂ ಕರೆದಿಲ್ಲಾ ಕ್ಷೇತ್ರದ ಶಾಸಕರಾಗಲಿ ತಾಲ್ಲೂಕು ದಂಡಾಧಿಕಾರಿಗಳಾಗಲಿ ಇದರ ಬಗ್ಗೆ ಚಕಾರ ಎತ್ತದೆ ಎಸ್ಸಿ ಎಸ್ಟಿಗಳನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ಹಲವಾರು ಕುಂದು ಕೊರತೆಗಳನ್ನು ಮುಕ್ತವಾಗಿ ಹೇಳಿಕೊಂಡು ಚರ್ಚಿಸಿ ಅದಕ್ಕೆ ಅಧಿಕಾರಿಗಳಿಂದಾಗಲಿ ಇಲ್ಲಾ ಜನಪ್ರತಿನಿಧಿಗಳಿಂದಾಗಲಿ ಬಗೆಹರಿಸಲು ಸೂಕ್ತ ವೇದಿಕೆಯಾಗಿತ್ತು ಕಳೆದ ಒಂದು ವರ್ಷದಿಂದ ಸಭೆ ಕರೆಯದೇ ನಮ್ಮ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ.
ಮೀಸಲು ಕ್ಷೇತ್ರವಾದ ದೇವನಹಳ್ಳಿ ಶಾಸಕರು ಹಾಗೂ ದೇವನಹಳ್ಳಿ ದಂಡಾಧಿಕಾರಿಗಳು ನಮ್ಮ ಸಮುದಾಯದವರೇ ಆಗಿದ್ದರೂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡದೇ ಉದಾಸೀನ ತೋರುತ್ತಿದ್ದಾರೆ. ವೇದಿಕೆಗಳಲ್ಲಿ ಮಾತ್ರ ನಮ್ಮ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಭಾಷಣ ಮಾಡುತ್ತಾರೆ ವಾಸ್ತವದಲ್ಲಿ ತುಳಿತಕ್ಕೆ ಶೋಷಣೆಗೆ ಒಳಗೊಂಡಿದೆ. ಅತೀ ಜರೂರಾಗಿ ಪರಿಶಿಷ್ಟ ಜಾತಿ ಪಂಗಡದ ಕುಂದು ಕೊರತೆ ಸಭೆ ಕರೆಯಬೇಕೆಂದು ಕನ್ನಮಂಗಲ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಸಮುದಾಯದ ಮುಖಂಡ ಸೋಮಶೇಖರ್ ಒತ್ತಾಯಿಸಿ ಎಚ್ಚರಿಸಿದರು.