ಕೆಂಗೇರಿ: ಸುಸ್ಥಿರ ಅಭಿವೃದ್ಧಿ ಈ ಹೊತ್ತಿನ ಅಗತ್ಯವಾಗಿದ್ದು, ಕಾಡಿನಂಚಿನ ಜನರ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಿ, ಅರಣ್ಯ ಸಂರಕ್ಷಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರು ಹೊರವಲಯ ಕೆಂಗೇರಿಯ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಂದು ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳ ಉದ್ಯಾನದಲ್ಲಿ ಸಸಿ ನೆಟ್ಟ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಕೃತಿ, ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಿದರೆ ಅವರು ಪರಿಸರ ರಾಯಭಾರಿಗಳಾಗಿ ಅರಣ್ಯ ಉಳಿಸಲು ಶ್ರಮಿಸುತ್ತಾರೆ. ತಮ್ಮ ಮನೆಯ ಮುಂದೆ ಗಿಡ ನೆಟ್ಟು ಪೋಷಿಸಿ ಹಸಿರು ಹೊದಿಕೆ ಹೆಚ್ಚಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕ್ರೈಸ್ಟ್ ನಂತಹ ವಿದ್ಯಾ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿ ವಿದ್ಯಾರ್ಥಿಗಳಲ್ಲಿ ಅರಣ್ಯದ ಬಗ್ಗೆ ಮತ್ತು ಸಾಂಪ್ರದಾಯಿಕ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದರು.