ಸಂತೋಷ್ ಲಾಡ್ ಅವರದ್ದು ಕಷ್ಟಕ್ಕೆ-ಬಡತನಕ್ಕೆ ಮಿಡಿಯುವ ಹೃದಯ: ಸಿಎಂ ಬಣ್ಣನೆ

ರೈತರು ಮತ್ತು ಕಾರ್ಮಿಕರು ದೇಶವನ್ನು ನಿರ್ಮಿಸುತ್ತಾರೆ. ದೇಶದಲ್ಲಿ ಉತ್ಪಾದನೆ ಮಾಡುತ್ತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಧಾರವಾಡ : ರೈತರು ಮತ್ತು ಕಾರ್ಮಿಕರು ದೇಶವನ್ನು ನಿರ್ಮಿಸುತ್ತಾರೆ. ದೇಶದಲ್ಲಿ ಉತ್ಪಾದನೆ ಮಾಡುತ್ತಾರೆ, ಸಂಪತ್ತು ಸೃಷ್ಟಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

 

ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 525 ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ, ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. 

ಬೆವರಿನ ಸಂಸ್ಕೃತಿಯ ಶ್ರಮಿಕರು ದೇಶದ ಸಂಪತ್ತನ್ನು ಸೃಷ್ಟಿಸುತ್ತಾರೆ. ಬಡವರ ಶ್ರಮದಿಂದ ಸೃಷ್ಟಿಯಾಗಿರುವ ದೇಶದ ಸಂಪತ್ತಿನಲ್ಲಿ ಶೇ 90 ರಷ್ಟು ಕೇವಲ 10 ಜನರ ಕೈಯಲ್ಲಿದೆ. ಇದು ತಪ್ಪು. ಶ್ರಮಿಕರ ದುಡಿಮೆಯ ಸಂಪತ್ತು ಎಲ್ಲರಲ್ಲೂ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ದೃಷ್ಟಿಯಿಂದ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

 

ಒಂದು ಕೋಟಿ ಮೂವತ್ತು ಲಕ್ಷ ಕುಟುಂಬಗಳಿಗೆ ಪ್ರತೀ ವರ್ಷ 50 ರಿಂದ 60 ಸಾವಿರ ರೂಪಾಯಿ ನೇರವಾಗಿ ತಲುಪುವ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿದೆ. ಇದರಿಂದ ನಾಡಿನ 4 ಕೋಟಿ ರೈತರು, ಕಾರ್ಮಿಕರು, ಬಡವರಿಗೆ ಅನುಕೂಲ ಆಗುತ್ತಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. 

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರದ್ದು ಕಷ್ಟಕ್ಕೆ, ಬಡತನಕ್ಕೆ ಮಿಡಿಯುವ ಹೃದಯ. ಈ ಕಾರಣಕ್ಕೇ ಇವರಿಗೆ ಕಾರ್ಮಿಕ ಇಲಾಖೆ ಸಚಿವರನ್ನಾಗಿ ಮಾಡಿದ್ದೇನೆ. ಸಂತೋಷ್ ಲಾಡ್ ಅವರ ಕಾಳಜಿಯಿಂದ CSR ನಿಧಿ ಮತ್ತು ಕಾರ್ಮಿಕ ಇಲಾಖೆ ಮೂಲಕ 525  ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದ್ದಾರೆ. ಇದು ನನಗೆ ಬಹಳ ಸಂತೋಷ ತಂದಿದೆ ಎಂದು ಮೆಚ್ಚುಗೆ ಸೂಚಿಸಿದರು. 

ಬಸವಾದಿ ಶರಣರು ಕಾಯಕ, ದಾಸೋಹ ಎಂದು ಕರೆದದ್ದು ಇದನ್ನೇ. ಉತ್ಪಾದನೆಯ ಸಮಾನ ಹಂಚಿಕೆಯೇ ಕಾಯಕ ಮತ್ತು ದಾಸೋಹ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಅಳಿಸಬಹುದು. ಅಂಬೇಡ್ಕರ್ ಅವರೂ ಆರ್ಥಿಕ, ಸಾಮಾಜಿಕ‌ ಅಸಮಾನತೆ ತೊಡೆಯಲು ಹೋರಾಡಿದ್ದರು. ಅಸಮಾನತೆಗೆ ಸಿಲುಕಿದವರು ಪ್ರಜಾಪ್ರಭುತ್ವದ ಸೌಧವನ್ನು ನಾಶಮಾಡಬಹುದು ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು ಎಂದು ವಿವರಿಸಿದರು.

ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ದುಡಿಯುವ ಶ್ರಮಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಮ್ಮ ಸರ್ಕಾರದ ಧ್ಯೇಯ ಎಂದರು.

 

ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್. ಹೆಚ್ . ಕೋನರೆಡ್ಡಿ ಸೇರಿ ಹಲವು ಗಣ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top