ಪುನೀತ್ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರಾಗಿ ಉಳಿದಿದ್ದಾರೆ

ಕೊಪ್ಪಳ,: ಪುನೀತ ರಾಜಕುಮಾರ ನಮ್ಮ ಕರ್ನಾಟಕ ಕಂಡ ಅಪ್ರತಿಮ ನಾಯಕ ನಟ. ನಟನೆ ಮೂಲಕ ಕೋಟ್ಯಾಂತರ ಜನರ ಅಭಿಮಾನಗಳಿಸಿದ್ದಲ್ಲದೆ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಅಸಂಖ್ಯಾತ ಜನರ ಹೃದಯದಲ್ಲಿ ಸ್ಥಾನಗಳಿಸಿರುವ ನಟ ಯಾರಾದ್ರೂ ಇದ್ರೆ ಅದು ಕರುನಾಡ ರಾಜರತ್ನ ಡಾ.ಪುನೀತ ರಾಜಕುಮಾರ ರವರು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ದಿ.ಡಾ.ಪುನೀತ ರಾಜಕುಮಾರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಪುನೀತ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೇಕ್ ಕಟ್ ಮಾಡುವುದರ ಮೂಲಕ ಅಪ್ಪು ರವರ ಹುಟ್ಟು ಹಬ್ಬವನ್ನ ಆಚರಿಸಿ ಅವರು ಮಾತನಾಡಿದರು.


ನಮ್ಮ ನಾಡು, ನಮ್ಮ ದೇಶ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪುನೀತ ರವರ ಸ್ಮರಣೆ ಮಾಡಿದ್ದನ್ನ ನಾವೆಲ್ಲ ಕಾಣಬಹುದು. ಅದಕ್ಕೆಲ್ಲ ಪುನೀತ ರಾಜಕುಮಾರ ಅವರಲ್ಲಿದ್ದ ಒಳ್ಳೆಯ ಲಕ್ಷಣಗಳು, ಜನರನ್ನ ಇಷ್ಟಪಟ್ಟು ಗೌರವಿಸುತ್ತಿದ್ದ ಗುಣಲಕ್ಷಣಗಳು ಪ್ರಮುಖ ಕಾರಣ. ನಾವು ಯಾರು ಕೂಡ ಆ ಜಾತಿಯಲ್ಲಿ ಹುಟ್ಟಬೇಕು ಈ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದವರಲ್ಲ. ಹುಟ್ಟಿದ್ದೇವೆ ಜಾತಿಗಳಿವೆ ನಾವು ಮನುಷ್ಯತ್ವದಿಂದ ಬಾಳಿದಾಗ ಮಾತ್ರ ಆ ಹುಟ್ಟಿಗೆ ಅರ್ಥ ಬರುತ್ತದೆ. ಅದನ್ನ ತೋರಿಸಿಕೊಟ್ಟವರು ಪುನೀತ ರಾಜಕುಮಾರ. ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಈ ಹುಟ್ಟು-ಸಾವಿನ ಮಧ್ಯದಲ್ಲಿ ಮನುಷ್ಯ ಏನ್ ಮಾಡಿದ್ದಾನೆ ಅನ್ನೋದು ಪ್ರಮುಖ ಪಾತ್ರವನ್ನ ವಹಿಸುತ್ತದೆ. ಈ ಮಾತಿಗೆ ಪ್ರಮುಖ ಉದಾಹರಣೆಯೇ ನಮ್ಮ ಕರುನಾಡ ರಾಜರತ್ನ ಪುನೀತ. ಪುನೀತ ರಾಜಕುಮಾರ್ ಅವರು ನಮ್ಮನ್ನ ಅಗಲಿರಬಹುದು ಆದರೆ ಅವರ ಆತ್ಮ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರ ಆಗಿ ಉಳಿದಿದೆ ಎಂದರು. ಈ ಸಂದರ್ಭದಲ್ಲಿ ಹಿಟ್ನಾಳ ಗ್ರಾಮದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top