ಬೆಂಗಳೂರು: ರಾಜ್ಯದ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರಾಳತೆ ನೀಡಿದ್ದು, ವಾಣಿಜ್ಯ ಬಳಕೆಯ ಎಲ್ಪಿಜಿ (ಎಲ್ಪಿಜಿ) ಸಿಲಿಂಡರ್ ಪೂರೈಕೆಯ ಮೇಲಿದ್ದ ಎಲ್ಲಾ ವಲಯವಾರು ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ. ಇದರಿಂದ ಕಳೆದ ಕೆಲವು ತಿಂಗಳುಗಳಿಂದ ಇಂಧನ ಕೊರತೆಯಿಂದ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮಕ್ಕೆ ಹೊಸ ಚೈತನ್ಯ ದೊರೆತಿದೆ.
ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಜಾಗತಿಕ ಪೂರೈಕೆ ಸರಪಳಿ ಸಮಸ್ಯೆಗಳ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆ ಕುಂಠಿತವಾಗಿತ್ತು. ಪರಿಣಾಮವಾಗಿ ರಾಜ್ಯದ ಹಲವು ಹೋಟೆಲ್ಗಳು ಮೆನು ಸೀಮಿತಗೊಳಿಸುವುದು, ಆಹಾರ ದರ ಹೆಚ್ಚಿಸುವುದು ಹಾಗೂ ಕಾರ್ಯಾಚರಣೆಯ ಸಮಯ ಕಡಿಮೆ ಮಾಡುವಂತಹ ಅನಿವಾರ್ಯ ಕ್ರಮಗಳನ್ನು ಕೈಗೊಂಡಿದ್ದವು.
ಈಗ ಕೇಂದ್ರ ಸರ್ಕಾರ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳು ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಿದ್ದು, ಗ್ರಾಹಕರಿಗೂ ಎಲ್ಲ ಖಾದ್ಯಗಳು ಲಭ್ಯವಾಗುವ ಜೊತೆಗೆ ಸೇವೆಯಲ್ಲಿ ಸ್ಥಿರತೆ ಮೂಡುವ ನಿರೀಕ್ಷೆ ವ್ಯಕ್ತವಾಗಿದೆ.
ರಾಜ್ಯ ಮಟ್ಟದ ಸಂಯೋಜಕ ಸಿದ್ಧಾರ್ಥ್ ಮಾತನಾಡಿ, ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಈಗ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ಮೇ ತಿಂಗಳಲ್ಲೇ ಶೇ.70ರಷ್ಟು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಇದೀಗ ಉಳಿದ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ. ಪೂರೈಕೆಯಲ್ಲಿ ಯಾವುದೇ ತೊಂದರೆ ಎದುರಾದರೆ ಗ್ರಾಹಕರು ಸಹಾಯವಾಣಿ ಅಥವಾ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಕೇಂದ್ರದ ಈ ಕ್ರಮವನ್ನು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಸ್ವಾಗತಿಸಿದ್ದು, ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿರುವುದು ಉದ್ಯಮಕ್ಕೆ ಅನುಕೂಲಕರವಾಗಿದೆ ಎಂದಿದ್ದಾರೆ. ಆದರೆ, ಇತ್ತೀಚೆಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಸುಮಾರು ₹900 ಏರಿಕೆಯಾಗಿದೆ. ಈ ದರ ಹೆಚ್ಚಳವನ್ನೂ ಸರ್ಕಾರ ಹಿಂಪಡೆಯಬೇಕು. ನಿರ್ಬಂಧದ ಅವಧಿಯಲ್ಲಿ ಹೆಚ್ಚಿನ ಹಣ ನೀಡಿ ಸಿಲಿಂಡರ್ ಖರೀದಿಸುವ ಪರಿಸ್ಥಿತಿ ಎದುರಾಗಿತ್ತು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ಅಗತ್ಯ ವಸ್ತುಗಳ ಕಾಯ್ದೆಯಡಿ ಸಿ3-ಸಿ4 ಹೈಡ್ರೋಕಾರ್ಬನ್ಗಳನ್ನು ಎಲ್ಪಿಜಿ ಉತ್ಪಾದನೆಗೆ ಮಾತ್ರ ಮೀಸಲಿಟ್ಟಿತ್ತು. ಇದೀಗ ದೇಶೀಯ ಉತ್ಪಾದನೆ ಹೆಚ್ಚಳ ಹಾಗೂ ಆಮದು ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಆ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ.
ಮೂಲಗಳ ಪ್ರಕಾರ, ದೇಶೀಯ ಎಲ್ಪಿಜಿ ಉತ್ಪಾದನೆಯನ್ನು ದಿನಕ್ಕೆ 40 ಟಿಎಂಟಿಗಿಂತ ಹೆಚ್ಚು ಮಟ್ಟದಲ್ಲಿ ಕಾಯ್ದುಕೊಳ್ಳುವ ಕ್ರಮ ಮುಂದುವರಿಯಲಿದ್ದು, ಬಲ್ಕ್ ಟ್ಯಾಂಕರ್ಗಳ ಮೂಲಕ ಪೂರೈಕೆಯ ಮೇಲಿನ ಕೆಲವು ತಾಂತ್ರಿಕ ನಿಯಮಗಳು ಮಾತ್ರ ಮುಂದುವರಿಯುವ ಸಾಧ್ಯತೆ ಇದೆ.
ಒಟ್ಟಾರೆ, ವಾಣಿಜ್ಯ ಎಲ್ಪಿಜಿ ಲಭ್ಯತೆ ಸುಧಾರಿಸಿರುವುದು ಹೋಟೆಲ್ ಮತ್ತು ಆಹಾರ ಉದ್ಯಮಕ್ಕೆ ದೊಡ್ಡ ನೆಮ್ಮದಿ ತಂದಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ, ಸಂಪೂರ್ಣ ಮೆನು ಹಾಗೂ ಬೆಲೆ ಏರಿಕೆಯ ಒತ್ತಡದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಾಣುವ ನಿರೀಕ್ಷೆ ಮೂಡಿದೆ.