‘ಕೃಷ್ಣ’ ನದಿಯ ಹೆಸರು, ದೇವರದಲ್ಲ: ಕೇಸರೀಕರಣ ಆರೋಪ ತಳ್ಳಿ ಹಾಕಿದ ಎನ್‌ಸಿಇಆರ್‌ಟಿ

ಎನ್‌ಸಿಇಆರ್‌ಟಿ ವಿರುದ್ಧ ಕೆಡಿಎ ಆಕ್ಷೇಪ ಮುಂದುವರಿಕೆ; ಪಠ್ಯದ ವಿಷಯ, ಆಹಾರ ಸಂಸ್ಕೃತಿ ಮತ್ತು ಪುಸ್ತಕದ ಹೆಸರಿನ ಕುರಿತು ಹೊಸ ವಿವಾದ

Kannada Nadu
‘ಕೃಷ್ಣ’ ನದಿಯ ಹೆಸರು, ದೇವರದಲ್ಲ: ಕೇಸರೀಕರಣ ಆರೋಪ ತಳ್ಳಿ ಹಾಕಿದ ಎನ್‌ಸಿಇಆರ್‌ಟಿ

ಬೆಂಗಳೂರು: ಆರನೇ ತರಗತಿಯ ಮೂರನೇ ಭಾಷೆಯ ಕನ್ನಡ ಪಠ್ಯಪುಸ್ತಕದ ವಿಷಯ ಹಾಗೂ ಅದರ ಹೆಸರಿನ ಕುರಿತು ಎದ್ದಿರುವ ವಿವಾದಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸ್ಪಷ್ಟನೆ ನೀಡಿದರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅದನ್ನು ತಿರಸ್ಕರಿಸಿದ್ದು, ಎರಡೂ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದೆ.

ಪಠ್ಯಪುಸ್ತಕದಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ತಪ್ಪಾಗಿ ಬಿಂಬಿಸಲಾಗಿದೆ ಹಾಗೂ ಸಸ್ಯಾಹಾರವನ್ನು ಮಾತ್ರ ಉತ್ತೇಜಿಸಲಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಎನ್‌ಸಿಇಆರ್‌ಟಿ ಸ್ಪಷ್ಟಪಡಿಸಿದೆ. ‘ಆರೋಗ್ಯವೇ ಭಾಗ್ಯ’ ಅಧ್ಯಾಯದಲ್ಲಿ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಸ್ವಚ್ಛತೆಯ ಮಹತ್ವವನ್ನು ವಿವರಿಸಲಾಗಿದ್ದು, ಎಲ್ಲಿಯೂ ಮಾಂಸಾಹಾರವನ್ನು ವಿರೋಧಿಸಿಲ್ಲ ಅಥವಾ ಸಸ್ಯಾಹಾರವನ್ನು ಸಮರ್ಥಿಸಿಲ್ಲ ಎಂದು ಹೇಳಿದೆ.

ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಕ್ಕಾಗಿ ಹಾಲು, ಹಸಿರು ಸೊಪ್ಪು, ತರಕಾರಿ, ಹಣ್ಣು ಸೇರಿದಂತೆ ವಿವಿಧ ಆಹಾರಗಳನ್ನು ಸೇವಿಸುವಂತೆ ಪಾಠದಲ್ಲಿ ತಿಳಿಸಲಾಗಿದೆ. ಅಲ್ಲದೆ, ಪಠ್ಯಪುಸ್ತಕದಲ್ಲಿರುವ ಚಿತ್ರದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ವಿಧದ ಆಹಾರಗಳನ್ನು ಪ್ರದರ್ಶಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.

ಆದರೆ, ಈ ವಿವರಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಶ್ನಿಸಿದೆ. ಚಿತ್ರದಲ್ಲಿ ಮೊಟ್ಟೆಯನ್ನು ಹೊರತುಪಡಿಸಿ ಮೀನು, ಮಾಂಸ ಅಥವಾ ಇತರ ಮಾಂಸಾಹಾರದ ಚಿತ್ರಗಳೇ ಇಲ್ಲ. ಹೀಗಿರುವಾಗ ಎರಡೂ ವಿಧದ ಆಹಾರಗಳನ್ನು ತೋರಿಸಲಾಗಿದೆ ಎಂಬ ಎನ್‌ಸಿಇಆರ್‌ಟಿ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಕೆಡಿಎ ಆರೋಪಿಸಿದೆ.

ಇದೇ ವೇಳೆ, ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಡಲಾಗಿದೆ ಎಂಬ ಕಾರಣಕ್ಕೆ ಕೇಸರೀಕರಣ ನಡೆಯುತ್ತಿದೆ ಎಂಬ ಟೀಕೆಯನ್ನೂ ಎನ್‌ಸಿಇಆರ್‌ಟಿ ತಳ್ಳಿಹಾಕಿದೆ. ‘ಕೃಷ್ಣ’ ಎಂಬ ಹೆಸರು ಶ್ರೀಕೃಷ್ಣನನ್ನು ಉಲ್ಲೇಖಿಸಿ ಇಡಲಾಗಿಲ್ಲ. ಕರ್ನಾಟಕದ ಮೂಲಕ ಹರಿಯುವ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯಿಂದ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಆದರೆ, ಈ ವಿವರಣೆಯನ್ನೂ ಕೆಡಿಎ ಒಪ್ಪಿಲ್ಲ. ಕರ್ನಾಟಕದ ಜೀವನಾಡಿ ಕಾವೇರಿ ಆಗಿರುವಾಗ ಕನ್ನಡ ಭಾಷೆಯ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಡುವುದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020)ಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ಪ್ರಯತ್ನವಾಗಿದೆ. ಕನ್ನಡದ ಸಾಂಸ್ಕೃತಿಕ ಹಿನ್ನೆಲೆ ಅರಿಯದವರು ಮಾತ್ರ ಇಂತಹ ನಿರ್ಧಾರ ಕೈಗೊಳ್ಳಬಹುದು ಎಂದು ಪ್ರಾಧಿಕಾರ ವಾಗ್ದಾಳಿ ನಡೆಸಿದೆ.

ಪಠ್ಯಪುಸ್ತಕದ ವಿಷಯ, ಆಹಾರ ಸಂಸ್ಕೃತಿಯ ನಿರೂಪಣೆ ಹಾಗೂ ‘ಕೃಷ್ಣ’ ಹೆಸರಿನ ಆಯ್ಕೆ ಕುರಿತಂತೆ ಎನ್‌ಸಿಇಆರ್‌ಟಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಶಿಕ್ಷಣ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";