* ಡಾ| ಆನಂದಕುಮಾರ್, ಮಾಜಿ ಕಾರ್ಯದರ್ಶಿ, ಕೆ.ಪಿ.ಸಿ.ಸಿ
ಮಲ್ಲಿಕಾರ್ಜುನ ಖರ್ಗೆ ಎ.ಐ.ಸಿ.ಸಿ ಅಧ್ಯಕರಾಗಿ ಇಂದಿಗೆ ವರ್ಷ ಪೂರ್ಣಗೊಳಿದ್ದಾರೆ. ಶೋಷಿತ ಸಮುದಾಯದವರು ಎ.ಐ.ಸಿ.ಸಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಮೊದಲಿಗರೆಂದರೆ ಅವಿಭಜಿತ ಆಂಧ್ರ ಪ್ರದೇಶದ ಸಂಜೀವಯ್ಯ ಮೊದಲಿಗರು. ಖರ್ಗೆ ಎರಡನೆಯವರು. ಎ.ಐ.ಸಿ.ಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಎಸ್. ನಿಜಲಿಂಗಪ್ಪ ಮೊದಲ ಕನ್ನಡಿಗರಾದರೆ, ಖರ್ಗೆ ಎರಡನೆಯವರು.
ಅಂತಹ ಉನ್ನತ ಸ್ಥಾನಕ್ಕೆ ಖರ್ಗೆ ಹೇಳಿಮಾಡಿಸಿದ ವ್ಯಕ್ತಿ. 82 ವರ್ಷದ ಮಾಗಿದ ನಾಯಕ ಖರ್ಗೆಯವರಿಂದಾಗಿ ಅಧ್ಯಕ್ಷ ಸ್ಥಾನದ ಗೌರವ, ಕೀರ್ತಿ, ಪ್ರತಿಷ್ಟೆ ಮತ್ತು ಖದರು ಇಮ್ಮಡಿಯಾಗಿದೆ. ಪರಿಪಕ್ವ ಅನುಭವದ ಪರಿಶುದ್ಧ ರಾಜಕಾರಣಿ ಖರ್ಗೆ ಐ.ಸಿ.ಯುನಲ್ಲಿದ್ದ ಕಾಂಗ್ರೆಸ್ಗೆ ಚೈತನ್ಯ ತುಂಬಿ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ 2 ರಿಂದ 3 ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳಿದ್ದು, ಇದರಲ್ಲಿ ಖರ್ಗೆ ಅವರ ಅನುಭವ ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ಈ ವಿಜಯ ಲೋಕಸಭಾ ಚುನಾವಣೆಯ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

ಬೀದರ್ ಜಿಲ್ಲೆಯ ವರವಟ್ಟಿ ಗ್ರಾಮದಲ್ಲಿ ಜನ್ಮತಳೆದು, ಬ್ರಿಟಿಷ್ ರೆಜಿಮೆಂಟಿನವರು ತನ್ನ ತಾಯಿಯನ್ನು ತನ್ನ ಕಣೆದುರೇ ಸುಟ್ಟಿದ್ದನ್ನು ಕಂಡು ತಂದೆಯೊಡನೆ ಗುಲ್ಭರ್ಗಾಕ್ಕೆ ಬಂದು ನೆಲೆಸಿ, ಕಾರ್ಮಿಕನ ಮಗ ಕಾನೂನು ಪದವೀಧರನಾಗಿ ರಾಜಕೀಯಕ್ಕೆ ಬಂದು ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಮೇಧಾವಿ. ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿದಂತೆ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕಂದಾಯ, ಸಣ್ಣ ಕೈಗಾರಿಕೆ, ಸಹಕಾರ, ಜಲಸಂಪನ್ಮೂಲ, ಗೃಹ, ಸಾರಿಗೆ, ಸಣ್ಣ ನೀರಾವರಿ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದರು. ವಿರೋಧಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರಾಗಿ ರಾಜಕಾರಣದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ಲೋಕಸಭಾ ಸದಸ್ಯರಾಗಿ ಕೇಂದ್ರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿ ರೈಲ್ವೆ ಹಾಗೂ ಸಾಮಾಜಿಕನ್ಯಾಯ, ಸಬಲೀಕರಣ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಖರ್ಗೆ ಅವರು ಪ್ರಸ್ತುತ ರಾಜ್ಯ ಸಭೆಯ ವಿರೋಧಪಕ್ಷದ ನಾಯಕರಾಗಿದ್ದಾರೆ.
ಐದೂವರೆ ದಶಕಗಳ ಸಕ್ರಿಯ ರಾಜಕಾರಣದಲ್ಲಿದ್ದರೂ, ಗಾಂಧಿ ಕುಟುಂಬಕ್ಕೆ ನಿಷ್ಟರು, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಆಪ್ತ ವಲಯದವರಾಗಿದ್ದರೂ ರಾಜ್ಯ ರಾಜಕಾರಣದಲ್ಲಿ ಇದಾವುದೂ ಅವರನ್ನು ಸಿ.ಎಂ. ಸ್ಥಾನದೆಡೆಗೆ ಕೈಹಿಡಿದು ನಡೆಸಲಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ. ಈ ಬಗ್ಗೆ ಅವರಿಗೆ ಬೇಸರವಿದ್ದರೂ, ಅವರ ಆಪ್ತರು ಈ ಕಾರಣಕ್ಕಾಗಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಸಿಟ್ಟಾದ ಸಂದರ್ಭಗಳಿದ್ದವು. ಪಕ್ಷದ ಅನೇಕ ಹಿರಿಯ ನಾಯಕರು ಆಸೆ – ಆಮಿಷಗಳಿಗೆ ಶರಣಾಗಿ ಬಂಡೆದ್ದರೂ ಖರ್ಗೆಯವರು ಮಾತ್ರ ತಮ್ಮ ಅಚಲ ನಿಷ್ಟೆಯನ್ನು ಯಾವತ್ತೂ ಬಿಟ್ಟುಕೊಡದೆ ಪಕ್ಷದ ಪರ ಬಂಡೆಯಂತೆ ನಿಂತಿದ್ದರು.

ಅತ್ಯಂತ ತಾಳ್ಮೆಯಿಂದ ಪಕ್ಷದ ನಿರ್ಧಾರ ಕೈಗೊಳ್ಳುವ, ಎಲ್ಲಾ ಸಂದರ್ಭಗಳನ್ನು ಅರ್ಥಮಾಡಿಕೊಂಡು ಸಂಯಮ ತೋರಿಸಿದ್ದು, ವಹಿಸಿದ ಜವಾಬ್ದಾರಿಗಳನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ್ದು, ಖರ್ಗೆಯವರ ಪ್ರಬುದ್ಧ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಪಕ್ಷ ಹಾಗೂ ಸಿದ್ದಾಂತಕ್ಕೆ ಅಚಲ ನಿಷ್ಠೆ ಜೊತೆಗೆ ಸಾಧಿಸಿ ತೋರಿಸುವ ಛಲ, ಆಳವಾದ ಅದ್ಯಯನದಿಂದ ಬಂದಿರುವ ವೈಚಾರಿಕ ಸ್ಪಷ್ಟತೆ, ಕಳಂಕ ರಹಿತ ರಾಜಕೀಯ ಜೀವನ, ಮುತ್ಸದ್ಧಿ ನಡೆ – ಎಲ್ಲವೂ ರಾಷ್ಟ್ರರಾಜಕಾರಣದಲ್ಲಿ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ.
ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿಯಾದರೆ, ರಾಜಕಾರಣದಲ್ಲಿ ಇಂದಿರಾಗಾಂಧಿಯವರನ್ನು ಅನುಸರಿಸಿ ನಿಷ್ಠೆ ಮೆರೆದವರು. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೇಲ್ವರ್ಗಗಳನ್ನು ವಿರೋಧಿಸಿ, ಕೆಳವರ್ಗಗಳನ್ನು ಪೋಷಿಸಿ ಬೆಳೆಸಿದ ಮುಖ್ಯಮಂತ್ರಿ ದೇವರಾಜ ಅರಸರ ಶಿಷ್ಯನಾಗಿ ಬೆಳೆದರೂ ಖರ್ಗೆ ಎಂದೂ ಮೇಲ್ವರ್ಗಗಳನ್ನು ವಿರೋಧಿಸಲಿಲ್ಲ. ಬಸವಲಿಂಗಪ್ಪನವರಂತೆ ಕೆಳವರ್ಗದ ಪರ ಘರ್ಜಿಸಲೂ ಇಲ್ಲ. ಮೇಲ್ವರ್ಗಗಳ ವಿಶ್ವಾಸ ಗಳಿಸಿಕೊಂಡು, ಕೆಳವರ್ಗದ ಜನರ ಹಿತಕ್ಕಾಗಿ ದುಡಿದರು.

ಆಜಾನುಬಾಹು ಶರೀರ, ಪ್ರಬುದ್ಧ ವ್ಯಕ್ತಿತ್ವ – ಎರಡನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದವರು. 54 ವರ್ಷ ಸತತ ಅಧಿಕಾರದಲ್ಲಿದ್ದರೂ ಅವರೆಂದೂ ತಪ್ಪು ಹೆಜ್ಜೆ ಇಡಲಿಲ್ಲ. ಮಾಧ್ಯಮಗಳಿಗೆ ಆಹಾರವಾಗಲಿಲ್ಲ, ಉಡಾಫೆಯಿಂದ ನಡೆದುಕೊಳ್ಳಲಿಲ್ಲ. ಈ ಒಂಟಿಸಲಗ ಅರಣ್ಯದ ಹಾದಿಯಲ್ಲೂ ಅಷ್ಟೆ. ರಾಜಮಾರ್ಗದಲ್ಲೂ ಅಷ್ಟೇ. ಒಂದೇ ವೇಗ, ಒಂದೇ ಗುರಿ.
ಐ.ಎನ್.ಡಿ ಐ.ಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸೇರಿ 26 ಪಕ್ಷಗಳಿವೆ. ಈ ಮೈತ್ರಿಕೂಟದ ಹಿರಿಯ ನಾಯಕರಿಗೆ ಭಾರತದ ಬಹುತ್ವ ಮತ್ತು ಸೌಹಾರ್ದತೆಯ ಬದುಕು ಪುನರ್ ಸ್ಥಾಪಿಸುವುದು ಮೊದಲ ಆದ್ಯತೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುವುದು, ಸಮೃದ್ಧ ಭಾರತ ನಿರ್ಮಿಸುವುದು ಅವರ ಕನಸಾಗಿದೆ. ಮೈತ್ರಿಕೂಟವನ್ನು ಸಂಘಟಿಸುತ್ತಿರುವ ವಿವಿಧ ಪಕ್ಷಗಳ ನಡುವೆ ಸಮನ್ವಯ ತರಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆಯವರು ಅಭಿಮಾನಪಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಅನುಭವವನ್ನು ಪಣಕ್ಕಿಟ್ಟು ಅವರು ಮೈತ್ರಿಕೂಟವನ್ನು ಬಲಪಡಿಸುತ್ತಿದ್ದಾರೆ, ಮುನ್ನಡೆಸುತ್ತಿದ್ದಾರೆ. ಹಾಗೆ ನೋಡಿದರೆ ಖರ್ಗೆಯವರಿಗೆ ಸೈದ್ಥಾಂತಿಕ ಸ್ಪಷ್ಟತೆ ಇದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಆದರ್ಶಗಳಲ್ಲಿ ಬಲವಾದ ನಂಬಿಕೆಯಿಟ್ಟು ರಾಜಕಾರಣ ಮಾಡಿದವರು.

ಖರ್ಗೆ ಬ್ರಷ್ಠಾಚಾರ ಅಂಟಿಸಿಕೊಳ್ಳದೆ, ಹಗರಣಗಳಲ್ಲಿ ಸಿಲುಕದೆ ಪ್ರಚಾರ ಬಯಸದೆ ಬಂದವರು. ಟೀಕೆ ಟಿಪ್ಪಣಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡಿದವರಲ್ಲ. ಮಾಡೆಲ್ ರಾಜಕಾರಣದ ವ್ಯಾಪಕ ಪ್ರಚಾರ ನಡೆದಿದ್ದರೆ, ಮೋದಿ ಇಷ್ಟೆಲ್ಲಾ ಅನಾಹುತ ಮಾಡಿಯೂ ಮಹಾನ್ ದೇಶಭಕ್ತರೆನಿಸಿಕೊಳ್ಳಲು ಅವಕಾಶವೇ ಇರುತ್ತಿರಲಿಲ್ಲ. ಖರ್ಗೆ ಕಾಂಗ್ರೆಸಿಗರಿಗೆ ಮಾತ್ರವಲ್ಲ. ಎಲ್ಲಾ ಪಕ್ಷಗಳ ರಾಜಕಾರಣಗಳಿಗೆ ಅವರದು ಅನುಕರಣೀಯ ವ್ಯಕ್ತಿತ್ವ.
ಮೈತ್ರಿಕೂಟದ ನೇತೃತ್ವ ವಹಿಸಿರುವ ಖರ್ಗೆಯವರ ಉದ್ದೇಶ, ಗುರಿ, ಸೈದ್ಥಾಂತಿಕ ಸ್ಪಷ್ಟತೆಯೊಂದಿಗೆ ಬದ್ದತೆಯಿಂದ ಮುನ್ನಡೆಯುತ್ತಿರುವುದು ಸಧ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಮೋದಿಯವರು ಕಟ್ಟುವ ಹುಸಿ ಕಥಾನಕಗಳ ಬಣ್ಣ ಬಯಲು ಮಾಡುವುದು, 2024ರ ಲೋಕಸಭಾ ಚುನಾವಣೆಯನ್ನು ಮೋದಿ ಕೇಂದ್ರಿತವಾಗದಂತೆ ತಡೆಯುವುದು ಅಗತ್ಯವಾಗಿದೆ. ಎನ್.ಡಿ.ಎ ಸರ್ಕಾರದ ವೈಫಲ್ಯವನ್ನು ಜನ ಸಾಮಾನ್ಯರ ಕಷ್ಟಕಾರ್ಪಣ್ಯವನ್ನು, ಮೋದಿ ಭಕ್ತರ ಹುಸಿ ದೇಶಭಕ್ತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು, ಅಪ್ಪಟ ದೇಶ ಭಕ್ತ, ಕರ್ನಾಟಕದ ಹೆಮ್ಮೆಯೆನಿಸಿರುವ ಖರ್ಗೆಯವರ ನೇತ್ರತ್ವದ ಮೈತ್ರಿಕೂಟ ಯಶಸ್ವಿಯಾದರೆ ಪ್ರಜಾಪ್ರಭುತ್ತದ ಮೌಲ್ಯಗಳು ಗೆದ್ದಂತೆ.