ಬೆಂಗಳೂರು:ಉತ್ತರ ಪ್ರದೇಶದಲ್ಲಿ ಸಂಸ್ಕೃತಿಯ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಹಾಗೂ ಯುದ್ಧೋಪಕರಣಗಳ, ಯುದ್ಧ ವಿಮಾನಗಳ ಮಹಾ ಕುಂಭ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಯಲಹಂಕ ವಾಯುನೆಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಏರೋ ಇಂಡಿಯಾ 2025ರ ವೈಮಾನಿಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.
ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಕಾರ್ಯ ಮಾಡಬೇಕಿದೆ. ಶಾಂತಿ, ಶಕ್ತಿ ನಮ್ಮ ಮಂತ್ರ ಬಲ ಆಗಬೇಕಿದೆ. ನಾವು ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಪ್ರದರ್ಶನ ಮಾಡಬೇಕಿದೆ. ಅತ್ಯಾಧುನಿಕ ಅನ್ವೇಷಣೆ ಮೂಲಕ ನಾವು ಮುಂದೆ ಹೆಜ್ಜೆ ಇಟ್ಟಿದ್ದೇವೆ ಏರ್ಶೋ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 10 ವರ್ಷಗಳಿಂದ ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,080 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ಇನ್ನೋವೇಷನ್ ಹಬ್, ಸಾಫ್ಟ್ವೇರ್ನ ಹೆಗ್ಗಳಿಕೆ ಹೊಂದಿರುವ ನಗರ. ಏರೋಸ್ಪೇಸ್ ಮೂಲಕವೂ ಬೆಂಗಳೂರು ಹೆಸರುವಾಸಿಯಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಬೆಂಗಳೂರು ಭಾರತದ ಏರ್ಫೋರ್ಸ್ ಕ್ಯಾಪಿಟಲ್ ಆಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15ನೇ ಆವೃತ್ತಿಯ ಏರ್ ಶೋದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಬೆಂಗಳೂರು ಭಾರತದ ಏರ್ಫೋರ್ಸ್ ಕ್ಯಾಪಿಟಲ್. ಇಲ್ಲಿ 1.5 ಲಕ್ಷ ಜನ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೈಮಾನಿಕ ಪ್ರದರ್ಶನ ಬರೀ ಪ್ರದರ್ಶನವಲ್ಲ, ನಮ್ಮ ಭದ್ರತಾ ಸಾಮರ್ಥ್ಯದ ಪ್ರದರ್ಶನ. ಇವತ್ತು ಬೆಂಗಳೂರು ಡಿಫೆನ್ಸ್ ಮತ್ತು ಮಾರುಕಟ್ಟೆಯನ್ನು ನಿರ್ವಹಿಸುವ ಏಕೈಕ ಕೇಂದ್ರವಾಗಿದೆ. ಇಂದು ಏರ್ಫೋರ್ಸ್ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಹೆಲಿಕಾಪ್ಟರ್ ತಯಾರಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದರು.
ಕರ್ನಾಟಕದಲ್ಲಿ ಇಂದು ಏರ್ ಕ್ರಾಫ್ಟ್ ಅಧ್ಯಯನಕ್ಕೆ ಸಂಬAಧಿಸಿದ ಅನೇಕ ಇಂಜಿನಿಯರಿAಗ್ ಕಾಲೇಜು ಹಾಗೂ ಸಂಸ್ಥೆಗಳಿವೆ. ಪ್ರತಿಭೆಗಳಿಗೆ ಕರ್ನಾಟಕ ಉತ್ತಮ ವೇದಿಕೆ ಒದಗಿಸುತ್ತಿದೆ. ಏರ್ ಶೋ ಎಲ್ಲರಿಗೂ ಒಂದು ಉತ್ತಮ ವೇದಿಕೆಯಾಗಲಿದೆ. ಏರ್ ಇಂಡಿಯಾ -2025ರ ಯಶಸ್ಸಿಗೆ ಕಾರಣವಾಗುತ್ತಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.