ಬೆಳಗಾವಿ: ಬಹು ನಿರೀಕ್ಷಿತ ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆಯನ್ನು ಪ್ರಾರಂಭಿಸಲು ವಿದ್ಯುತ್ ಸಂಪರ್ಕಕ್ಕಾಗಿ ನಿರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ವಿದ್ಯುತ್ ಸಂಪರ್ಕ ದೊರೆಯುವ ನಿರೀಕ್ಷೆಯಿದ್ದು, ಹೆಸ್ಕಾಂ ಕಂಪನಿಯಿಂದ ಬೇಡಿಕೆ ಆದೇಶಕ್ಕಾಗಿ (Demand Note) ಕಾಯಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ರವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಈ ಆದೇಶ ದೊರಕಿದ ತಕ್ಷಣ ವೆಚ್ಚವನ್ನು ಹೆಸ್ಕಾಂ ಗೆ ಭರಿಸಿದ ಯೋಜನೆ ಪ್ರಾರಂಭ ಮಾಡಲಾಗುವುದೆಂದು ಸಚಿವರು ತಿಳಿಸಿದರು. ಕುಷ್ಟಗಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ರಡಿಯ ಒಂದು ಪ್ರಮುಖ ಏತ ನೀರಾವರಿ ಉಪ ಯೋಜನೆಯಾಗಿದೆ. ಸದರಿ ಯೋಜನೆಯಡಿ ನಾರಾಯಣಪೂರ ಜಲಾಶಯದ ಹಿನ್ನೀರಿನಿಂದ ಆರ್.ಎಲ್.487.00 ಮೀ. ರಿಂದ ಆರ್.ಎಲ್ 660.00 ಮೀ. ವರೆಗೆ ಎರಡು ಹಂತದಡಿ ನೀರನ್ನು ಲಿಫ್ಟ್ ಮಾಡಿ ಹನಿ ನೀರಾವರಿ ಪದ್ದತಿ ಅಳವಡಿಸಿ ಕೊಪ್ಪಳ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಡಿ ಒಟ್ಟಾರೆಯಾಗಿ 2.77 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು, ಕಾಮಗಾರಿಯ ಪ್ರಗತಿಯು ವಿವಿಧ ಹಂತದಲ್ಲಿರುವುದಾಗಿ ಸಚಿವರು ತಿಳಿಸಿದರು.