ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಸಹಿಸಲು ಸಾಧ್ಯವಿಲ್ಲ -ಸಿದ್ದರಾಮಯ್ಯ

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕನ್ನಡಿಗರ ಉದಾರತೆಯನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳುವ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಘಟನೆ ಸಂಬಂಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ್ದಾರೆ. ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಇಂದು ವಿಧಾನಭೆಯಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದರು.


ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ಕನ್ನಡದ ಧ್ವಜ ಕನ್ನಡಿಗರ ಹೆಮ್ಮೆ. ಆ ಧ್ವಜವನ್ನು ಕಿಡಿಗೇಡಿಗಳು ಮಹಾರಾಷ್ಟ್ರದಲ್ಲಿ ಸುಟ್ಟು ಹಾಕಿ ಅಗೌರವ ತೋರಿಸಿದ್ದಾರೆ. ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಇಡೀ ದೇಶದ ಆಸ್ತಿ. ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಆರೂವರೆ ಕೋಟಿ ಕನ್ನಡಿಗರು ಸೇರಿದಂತೆ ಇಡೀ ದೇಶಕ್ಕೆ ಮಾಡಿರುವ ಅವಮಾನ. ಇದು ಪುಂಡು, ಪೋಕರಿಗಳಿಗೆ ಏಕೆ ಆರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಬೆಳಗಾವಿಯ ಅನಗೋಳದಲ್ಲಿ ರಾಯಣ್ಣ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಶಿವಾಜಿಯವರು ಪ್ರತಿಮೆ ವಿರೂಪಗೊಳಿಸಲಾಗಿದೆ. ರಾಯಣ್ಣ, ಶಿವಾಜಿ, ಝಾನ್ಸಿರಾಣಿ ಲಕ್ಷ್ಮಿಬಾಯಿ ಈ ಎಲ್ಲರೂ ದೇಶಕ್ಕಾಗಿ ಹೋರಾಟ ಮಾಡಿದವರು. ಅಂತಹವರ ಪ್ರತಿಮೆಯನ್ನು ವಿರೂಪಗೊಳಿಸುವ ಕಿಡಿಗೇಡಿಗಳು ಬುದ್ಧಿಗೇಡಿಗಳು, , ಅವಿವೇಕಿಗಳು. ಇಂತಹ ಸ್ವಾತಂತ್ರ್ಯ ಸೇನಾನಿಗಳಿಗೆ ಅವಮಾನ ಮಾಡಿದರೆ ಅದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ. ಅರ್ಥವಾಗುವಂತೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಪುಂಡು, ಪೋಕರಿಗಳನ್ನು ಗಡಿಪಾರು ಮಾಡಬೇಕು. ಎಂಇಎಸ್ ನವರು ಪದೇ ಪದೇ ಕಾಲು ಕರೆದು ಜಗಳಕ್ಕೆ ಬರುತ್ತಿದ್ದಾರೆ. ಕನ್ನಡಿಗರು ಉದಾರಿಗಳು, ಸ್ವಾಭಿಮಾನಿಗಳು. ಅದನ್ನೇ ಅವರು ದೌರ್ಬಲ್ಯ ಎಂದು ಭಾವಿಸಿ ತಗಾದೆ ತೆಗೆಯುತ್ತಿದ್ದಾರೆ. ಹೀಗಾಗಿ ಎಂಎಎಸ್ ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕನ್ನಡಿಗರ ಉದಾರತೆಯನ್ನು ದೌರ್ಬಲ್ಯ ಎಂದು ಭಾವಿಸಿರುವ ಎಂಇಎಸ್ ನವರು ಮೂರ್ಖರು, ದುರಹಂಕಾರಿಗಳು. ಪುಂಡಾಟಿಕೆ ಮಾಡುವವರನ್ನು ಸರ್ಕಾರ ಬಲಿ ಹಾಕಬೇಕು. ಕನ್ನಡದ ನೆಲ, ಜಲ ಬೇಕು ಎನ್ನುವ ಈ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಬೇಕು. ಎಲ್ಲ ಪಕ್ಷಗಳು ಒಂದಾಗಿ ಕನ್ನಡ ನಾಡು ಉಳಿಸುವ ಕೆಲಸ ಮಾಡಬೇಕು. ರಾಯಣ್ಣ ಮತ್ತು ಶಿವಾಜಿಯವರ ಪ್ರತಿಮೆಗೆ ಅವಮಾನ ಮಾಡಿದವರು ಯಾರೇ ಆಗಿರಲಿ, ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ನೀಚ ಕೆಲಸ ಮಾಡುವುದರಲ್ಲಿ ಎಂಇಎಸ್‌ನವರು ನಿಸ್ಸೀಮರು. ಪದೇ ಪದೇ ಕಿತಾಪತಿ ಮಾಡುವ, ಶಾಂತಿ ಕದಡುವುದು ಅವರ ಕೆಲಸ. ಇದನ್ನು ಇನ್ನು ಕನ್ನಡಿಗರು ಸಹಿಸಲು ಸಾಧ್ಯವೇ ಇಲ್ಲ. ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಒತ್ತಾಯಿಸಿದರು.

Leave a Comment

Your email address will not be published. Required fields are marked *

Translate »
Scroll to Top