2025 ರ ಮೊದಲ 6 ತಿಂಗಳಲ್ಲಿ 107 ಕನ್ನಡ ಚಿತ್ರಗಳು..೧೦ ಕೋಟಿ ಗಡಿ ದಾಟಿಲ್ಲ ಯಾವುದೇ ಸಿನಿಮಾ ಕಲೆಕ್ಷನ್ !
2025ರಲ್ಲಿ ಕನ್ನಡ ಚಿತ್ರರಂಗದ ಕಳಪೆ ಪ್ರದರ್ಶನ ಮುಂದುವರೆದಿದೆ. ಈಗಾಗಲೇ ವರ್ಷದ 6 ತಿಂಗಳು ಕಳೆದೇ ಹೋಗಿದೆ. ಕಳೆದ ವರ್ಷ ಡಿಸೆಂಬರ್ 25ಕ್ಕೆ ತೆರೆಗೆ ಬಂದಿದ್ದ ‘ಮ್ಯಾಕ್ಸ್’ ಚಿತ್ರವೇ ಕೊನೆ. ಬಳಿಕ ಯಾವುದೇ ಸಿನಿಮಾ ಸದ್ದು ಮಾಡಲೇ ಇಲ್ಲ. ಇನ್ನು ಒಂದು ತಿಂಗಳು ಅಂಥಹ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿಲ್ಲ.
ಮುಂದಿನ ತಿಂಗಳು ‘ಎಕ್ಕ’ ಸಿನಿಮಾ ಬಿಡುಗಡೆ ಆಗುತ್ತಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಯುವರಾಜ್ಕುಮಾರ್ ನಟನೆಯ ಈ ಆಕ್ಷನ್ ಥ್ರಿಲ್ಲರ್ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಸೆಳೆಯುವ ಸುಳಿವು ಸಿಗುತ್ತಿದೆ. ಇನ್ನುಳಿದಂತೆ ಈ 6 ತಿಂಗಳಲ್ಲಿ ಕನ್ನಡ ಚಿತ್ರರಂಗ ಯಾವುದೇ ಸಾಧನೆ ಮಾಡಿಲ್ಲ. ಅಚ್ಚರಿ ಅಂದರೆ ಯಾವುದೇ ಸಿನಿಮಾ ಗಳಿಕೆ 10 ಕೋಟಿ ರೂ. ಗಡಿ ದಾಟಿಲ್ಲ.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾ ನಿರ್ಮಾಣ ತಡವಾಗುತ್ತಿದೆ. ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶ್ರೀಮುರಳಿ, ಸುದೀಪ್ ಎಲ್ಲರೂ ಸಿನಿಮಾ ಮಾಡುವ ಸ್ಪೀಡ್ ತಗ್ಗಿಸಿದ್ದಾರೆ. ಮಾಡಿದರೆ ದೊಡ್ಡ ಸಿನಿಮಾ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ನಿಯಮಿತವಾಗಿ ಸ್ಟಾರ್ ನಟರ ಸಿನಿಮಾ ಬರದೇ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸಿಕೊಳ್ಳಲು ಇತ್ತೀಚೆಗೆ ನಟ ಶಿವರಾಜ್ಕುಮಾರ್ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಲಾಗಿತ್ತು. ಈ ವರ್ಷ ಕೊಂಚ ನಿರೀಕ್ಷೆ ಹುಟ್ಟಾಕ್ಕಿದ್ದ ಕೆಲ ಸಿನಿಮಾಗಳು ಕೈಹಿಡಿಯಲಿಲ್ಲ. ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ-2’, ಯೋಗರಾಜ್ ಭಟ್ರ ‘ಮನದ ಕಡಲು’, ವಿಜಯ ಪ್ರಸಾದ್- ಯೋಗಿ ಕಾಂಬಿನೇಷನ್ ‘ಸಿದ್ಲಿಂಗು- 2’ ಚಿತ್ರಗಳು ನಿರೀಕ್ಷೆ ಹುಸಿಯಾಗಿಸಿದ್ದವು. ‘ಛೂ ಮಂಥರ್’, ‘ಅಜ್ಞಾತವಾಸಿ’ ಹಾಗೂ ‘ಯುದ್ಧಕಾಂಡ- 2’ ಚಿತ್ರಗಳು ಅಚ್ಚರಿಯ ಗೆಲುವು ಕಂಡವು.
ವರ್ಷದ ಆರಂಭವೇ ನೀರಸವಾಗಿತ್ತು. ಮೊದಲ ವಾರ ಹೊಸಬರ 3 ಚಿತ್ರಗಳು ತೆರೆಗೆ ಬಂದಿದ್ದವು. ಬಳಿಕ 2ನೇ ವಾರ ಶರಣ್ ನಟನೆಯ ಹಾರರ್ ಥ್ರಿಲ್ಲರ್ ‘ಛೂ ಮಂತರ್’ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ಕೆಲ ಸಿನಿಮಾಗಳು ಬಂದು ಗೆಲ್ಲುವ ಉತ್ಸಾಹದಲ್ಲಿದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ. ಫೆಬ್ರವರಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ‘ಭುವನಂ ಗಗನಂ’, ‘ವಿಷ್ಣುಪ್ರಿಯ’, ‘ಸಿದ್ಲಿಂಗು- 2’ ಚಿತ್ರಗಳಿಕೆ ಒಳ್ಳೆ ಟಾಕ್ ಬಂದಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲಿಲ್ಲ.
ಮಾರ್ಚ್ ತಿಂಗಳಲ್ಲಿ ಕೂಡ ಸ್ಯಾಂಡಲ್ವುಡ್ ಸಾಧನೆ ಶೂನ್ಯ. ಒಂದೇ ವಾರ ಮೇ 2ನೇ ವಾರ ‘ಅಜ್ಞಾತವಾಸಿ’, ‘ವಾಮನ’, ‘ವಿದ್ಯಾಪತಿ’ ಚಿತ್ರಗಳು ಸದ್ದು ಮಾಡುವ ಸುಳಿವು ಸಿಕ್ಕಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಅಂತಹ ಆರ್ಭಟ ಕಾಣಲಿಲ್ಲ. ಬಹಳ ಬೇಗನೆ 2 ಚಿತ್ರಗಳು ಓಟಿಟಿಗೆ ಬಂದುಬಿಟ್ಟವು. ಹೇಮಂತ್ ರಾವ್ ನಿರ್ಮಾಣದ ‘ಅಜ್ಞಾತವಾಸಿ’ ಸಿನಿಮಾ ಪರವಾಗಿಲ್ಲ ಎನಿಸಿಕೊಂಡಿತ್ತು. ರಂಗಾಯಣ ರಘು ನಟನೆಯ ಕ್ರೈಂ ಥ್ರಿಲ್ಲರ್ ಚಿತ್ರವನ್ನು ಯಾವುದೇ ಆರ್ಭಟ ಇಲ್ಲದೇ ರಿಲೀಸ್ ಮಾಡಲಾಗಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ತಕ್ಕಮಟ್ಟಿಗೆ ಗೆದ್ದಿತ್ತು.
ಅಜಯ್ ರಾವ್ ನಿರ್ಮಿಸಿ ನಟಿಸಿದ್ದ ‘ಯುದ್ಧಕಾಂಡ’-2 ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಅಜಯ್ ರಾವ್ಗೆ ಒಳ್ಳೆ ಬ್ರೇಕ್ ಕೊಟ್ಟಿತ್ತು. ಇನ್ನು ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿ ಅವರು ಗಮನ ಸೆಳೆದಿದ್ದರು. ರವಿ ಬಸ್ರೂರು ನಿರ್ದೇಶನದ ‘ವೀರಚಂದ್ರಹಾಸ’, ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಣದ ‘ಫೈರ್ಫ್ಲೈ’ ಚಿತ್ರಗಳು ವಿಭಿನ್ನ ಪ್ರಯೋಗದಿಂದ ಗಮನ ಸೆಳೆಯಿತು. ಒಟ್ಟಾರೆ ವರ್ಷದ ಮೊದಲ 6 ತಿಂಗಳಲ್ಲಿ 107 ಕನ್ನಡ ಚಿತ್ರಗಳು ತೆರೆಗೆ ಬಂದಿದ್ದವು.
ವರ್ಷದ 6 ತಿಂಗಳ ಕಥೆ ಹೀಗಾಯ್ತು. ಮುಂದಿನ 6 ತಿಂಗಳು ಸ್ಯಾಂಡಲ್ವುಡ್ ಕಥೆ ಏನು ಎಂದು ನೋಡುವುದಾದರೆ ಕೆಲ ಇಂಟ್ರೆಸ್ಟಿಂಗ್ ಚಿತ್ರಗಳು ತೆರೆಗೆ ಬರಲಿವೆ. ಯುವರಾಜ್ಕುಮಾರ್ ನಟನೆಯ ‘ಎಕ್ಕ’, ಅರ್ಜುನ್ ಜನ್ಯಾ ನಿರ್ದೇಶನದ ’45’, ಜೋಗಿ ಪ್ರೇಮ್- ಧ್ರುವ ಜೋಡಿಯ ‘ಕೆಡಿ’, ರಿಷಬ್ ಶೆಟ್ಟಿ ಬಹುನಿರೀಕ್ಷಿತ ‘ಕಾಂತಾರ- 2’, ದುನಿಯಾ ವಿಜಯ್ ನಿರ್ದೇಶನದ ‘ಸಿಟಿಲೈಟ್ಸ್’, ದರ್ಶನ್ ನಟನೆಯ ‘ಡೆವಿಲ್’, ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಚಿತ್ರಗಳು ಸದ್ದು ಮಾಡುವ ನಿರೀಕ್ಷೆಯಿದೆ