ಕೊಪ್ಪಳ,ಫೆ,22 : ಗ್ರಾಮೀಣ ಪ್ರದೇಶದಲ್ಲಿನ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುವಲ್ಲಿ ಐಇಸಿ ಚಟುವಟಿಕೆ ಅವಶ್ಯಕವಾಗಿದ್ದು, ನಮ್ಮ ಜಿಲ್ಲೆ ರಾಜ್ಯಕ್ಕಷ್ಟೆ ಅಲ್ಲ. ದೇಶಕ್ಕೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರು ಸಲಹೆ ನೀಡಿದರು. ಕೊಪ್ಪಳ ಜಿಲ್ಲೆಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿ ಕೊಪ್ಪಳ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಕೊಪ್ಪಳ ವತಿಯಿಂದ ನರೇಗಾ, ಎನ್.ಆರ್.ಎಲ್.ಎಂ, ಎಸ್.ಬಿಎಂ.ಯೋಜನೆಗಳ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ಸರ್ಕಾರಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಟಾನಗೊಳಿಸುತ್ತಿದೆ. ಆದರೆ, ಅದು ದಾಖಲೆಗಳಿಗಷ್ಟೆ ಸೀಮಿತವಾಗಿದೆ. ಇದರ ಬದಲು ಗ್ರಾಮದ ಪ್ರತಿಯೊಬ್ಬ ಪ್ರಜೆಗೂ ಆ ಯೋಜನೆಯ ಸಂಪೂರ್ಣ ಮಾಹಿತಿ ತಲುಪಬೇಕು. ಅದಕ್ಕಾಗಿ ಐಇಸಿ ಚಟುವಟಿಕೆಗಳು ಪರಿಣಾಮಕಾರಿಯಾಗುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು, ಐಇಸಿ ಚಟುವಟಿಕೆಗಳಿಂದ ವ್ಯಾಪಕವಾಗಿ ಪ್ರಚಾರ ಕೂಡ ಆಗುತ್ತಿದೆ. ಇದು ಬರೀ ನರೇಗಾ ಯೋಜನೆಯಷ್ಟೆ ಅಲ್ಲ. ಎಸ್ ಬಿಎಂ, ಎನ್ಆರ್ ಎಲ್ ಎಂ ಸ್ವ ಸಹಾಯ ಸಂಘದವರಲ್ಲೂ ಸಾಕಷ್ಟು ಕೆಲಸಗಳು ಆಗುತ್ತಿವೆ. ಅವುಗಳನ್ನು ಹೇಗೆ ಗುರುತಿಸಬಹುದು. ಅವರುಗಳ ದಾಖಲೀಕರಣ ಮಾಡಬಹುದು ಎಂಬುದಕ್ಕೆ ಈ ಕಾರ್ಯಾಗಾರದಲ್ಲಿ ಚರ್ಚಿಸಬೇಕೆಂಬ ಉದ್ದೇಶದಿಂದ ಕಾರ್ಯಗಾರ ಹಮ್ಮಿಕೊಂಡಿದೆ ಎಂದರು. ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರದಿಂದ ಏನೇನು ಕಾಮಗಾರಿಗಳು ನಡೆಯುತ್ತಿವೆ ಎಂಬ ಬಗ್ಗೆ ಫಲಾನುಭವಿಗಳಿಗೆ ತಿಳಿಯಬೇಕು.
ಅಷ್ಟೆ ಅಲ್ಲದೇ ರಾಜ್ಯದ ಜನರಿಗೆ ಹಾಗೂ ಸರ್ಕಾರಕ್ಕೆ ತಿಳಿಯುವಂತ ಐಇಸಿ ಚಟುವಟಿಕೆ ಮಾಡಬೇಕು. ಅಂದಾಗ ಮಾತ್ರ ನಮ್ಮ ಉದ್ದೇಶ ಈಡೇರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕಿ(ಗ್ರಾಉ) ಸೌಮ್ಯ ಕೆ, ಜಿಲ್ಲಾ ಪಂಚಾಯತ್ ನರೇಗಾ, ಎಸ್ ಬಿಎಂ, ಎನ್ಆರ್ ಎಲ್.ಎಂ ಸಿಬ್ಬಂದಿ ಹಾಗೂ ಆಯಾ ತಾಲೂಕು ಐಇಸಿ ಸಂಯೋಜಕರು, ತಾಲೂಕು NRLM ಸಿಬ್ಬಂದಿ ಹಾಜರಿದ್ದರು.