ಹೊಸಪೇಟೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮತಾಂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಶಿಬಿರ ಉದ್ಘಾಟಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಅವರು ಜಂಬು ದೀಪದಿಂದ ಉದಯಿಸಿದ ನಮ್ಮ ಭಾರತ ದೇಶಕ್ಕೆ ಮಹಿಳೆಯರ ಕೊಡುಗೆ ಅತ್ಯಮೂಲ್ಯವಾದದ್ದು ಹಾಗೂ ಪ್ರಪಂಚದಲ್ಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಏಕೈಕ ದೇಶದ ಮಹಿಳೆಯರ ಅಂದರೆ ಅದು ನಮ್ಮ ಭಾರತ ದೇಶದ ಮಹಿಳೆಯರು; ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿಲಕ್ಷ್ಮೀ ಬಾಯಿ, ಒನಕೆ ಓಬವ್ವ ಎಂದರು.
ಸಮಾಜ ಸೇವೆ ಸಲ್ಲಿಸಿದ ಸಾಲುಮರದ ತಿಮ್ಮಕ್ಕ,1000 ಹೆರಿಗೆ ಮಾಡಿದ ಸೂಲಗಿತ್ತಿ ನರಸಮ್ಮ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದ ಪ್ರತಿಭಾ ಪಾಟೀಲ್, ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದ ಇಂದಿರಾಗಾಂಧಿಯಂತಹ ಅನೇಕ ಮಹಿಳೆಯರನ್ನು ನೆನೆದರು.
ಗ್ರಾಮೀಣ ಪ್ರದೇಶದ ಮಹಿಳೆಯರಾದ ತಾವು ಕೂಡ ಸಮಾಜದ ಮುಖ್ಯವಾಹಿನಿಗೆ ಬಂದು ನಿಮ್ಮ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರು,ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ತಾಲೂಕು ಪಂಚಾಯಿತಿ ಐಇಸಿ ಸಂಯೋಜಕರು,ಕೆಎಚ್ಟಿಪಿ ಸಿಬ್ಬಂದಿ ಮತ್ತಿತರರು ಹಾಜರಿದ್ದರು.