ಬೆಂಗಳೂರು: ಇಂದು ಬೆಳಗ್ಗೆ ನಿಧನರಾದ ರಾಜ್ಯದ ಮಾಜಿ ರಾಜ್ಯಪಾಲರಾದ ಕೆ.ರೋಶಯ್ಯ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು; “2014ರಲ್ಲಿ ರಾಜ್ಯದ ರಾಜ್ಯಪಾಲರಾಗಿ, ಜತೆಗೆ; ತಮಿಳುನಾಡಿನ ರಾಜ್ಯಪಾಲರು ಹಾಗೂ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಕೆ.ರೋಶಯ್ಯ ಅವರ ಹಠಾತ್ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ. ರಾಜಕೀಯದಲ್ಲಿ ಅಜಾತಶತ್ರು ಆಗಿದ್ದ ರೋಶಯ್ಯ ಅವರು ಪ್ರಾಮಾಣಿಕ, ದಕ್ಷ ಆಡಳಿತಗಾರರಾಗಿದ್ದರು.
ಶ್ರೇಷ್ಟ ರಾಜಕೀಯ ಮುತ್ಸದ್ದಿಯಾಗಿದ್ದ ರೋಶಯ್ಯ ಅವರು ರಾಜಕೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಋಷಿಯಂತೆ ದುಡಿಯುತ್ತಿದ್ದರು. ಅವರ ಅಗಲಿಕೆ ದೊಡ್ಡ ನಷ್ಟ. ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಚೇತನಕ್ಕೆ ನನ್ನ ಶ್ರದ್ಧಾಂಜಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.