ಬೆಂಗಳೂರು: ಶಾಂತಿ, ಸೌಹಾರ್ಧ, ಸಾಮರಸ್ಯ, ಸಮೃದ್ಧ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಲೋಕನಾಯಕ ಜಿಪಿ ವಿಚಾರ ವೇದಿಕೆ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿದ್ದು, ಎಲ್ಲೆಡೆ ಶಾಂತಿ ಮರುಸ್ಥಾಪನೆ ಆಶಯದಿಂದ ಈ ವಿಚಾರ ಸಂಕಿರಣವು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಇದು ಸಂಪೂರ್ಣ ರಾಜಕೀಯೇತರ ಕಾರ್ಯಕ್ರಮ ಆಗಿರುತ್ತದೆ. ಸುಪ್ರಸಿದ್ಧ ಕಾದಂಬರಿಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂ.ವೀರಭದ್ರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ.
ರಾಜ್ಯ ಹೈಕೋರ್ಟ್’ನ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್ ದಾಸ್, ಆದಿಚುಂಚನಗಿರಿ ಕ್ಷೇತ್ರದ ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಕೂಡಲ ಸಂಗಮದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಮುಫ್ತಿ ಮಹಮ್ಮದ್ ಮಿಸ್ ಬಾಯ್ ಜಮಾಲಿ ನೂರಿ, ಕ್ರೈಸ್ತ ಧರ್ಮಗುರುಗಳಾದ ಫಾದರ್ ಸಿರಿಲ್ ವಿಕ್ಟರ್ ಅವರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.