ಬೆಂಗಳೂರು: 60 ವರ್ಷ ಪೂರ್ಣಗೊಂಡಿದೆ ಎನ್ನುವ ಕಾರಣ ನೀಡಿ ಯಾವುದೇ ರೀತಿಯ ನಿವೃತ್ತಿ ಸೌಲಭ್ಯವನ್ನು ನೀಡದೇ ಸುಮಾರು 11 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡುವ ಮೂಲಕ ಖಂಡಿಸಿದ್ದಾರೆ. “ಯಾವುದೇ ನಿವೃತ್ತಿ ಭತ್ಯೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡದೆ ರಾಜ್ಯದ 11 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದಶಕಗಳಿಂದ ನಮ್ಮ ಮಕ್ಕಳ ಪಾಲನೆ, ಪೋಷಣೆ ಮಾಡಿದವರನ್ನು ʼನಾಳೆಯಿಂದ ಬರುವ ಅವಶ್ಯಕತೆ ಇಲ್ಲʼ ಎಂದು ಹೇಳಲು ಮನಸ್ಸಾದರೂ ಹೇಗೆ ಬಂತು.

ಅವರಿಗೆ ನಾವು ಕೃತಜ್ಞರಾಗಿರಬೇಕಲ್ಲವೇ?” ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾಗೊಳಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಬಿಸಿಯೂಟ ನೌಕರರ ಹಿತಾಸಕ್ತಿಯ ಬಗ್ಗೆ ಗಮನ ಸೆಳೆದಿರುವ ಅವರು, “2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ, ನಾವು ಅವರ ಬೆಂಬಲಕ್ಕೆ ನಿಲ್ಲುವುದು ಮಾತ್ರವಲ್ಲದೆ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ.” ಎಂದು ಭರವಸೆ ನೀಡಿದ್ದಾರೆ.