ಡಿ.ಕೆ ಶಿವಕುಮಾರ್ ಆರೋಪ ಸುಳ್ಳು, ಸುಳ್ಳೇ ಅವರ ಮನೆ ದೇವರು: ನಿಖಿಲ್ ಕುಮಾರ ಸ್ವಾಮಿ

Kannada Nadu
ಡಿ.ಕೆ ಶಿವಕುಮಾರ್ ಆರೋಪ ಸುಳ್ಳು, ಸುಳ್ಳೇ ಅವರ ಮನೆ ದೇವರು: ನಿಖಿಲ್ ಕುಮಾರ ಸ್ವಾಮಿ
ಬೆಂಗಳೂರು: ಡಿ.ಕೆ ಶಿವಕುಮಾರ್ ಗೆ ಗಾಳಿಯಲ್ಲಿ ಗುಂಡು ಹೊಡೆಯೋ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು, ಸುಳ್ಳೇ ಅವರ ಮನೆ ದೇವರು. ನಾವೇನಾದ್ರು ಜಮೀನು ಪರಿಹಾರ ಅರ್ಜಿ ಬರೆದಿದ್ರೆ, ಆ ಜಮೀನನ್ನ ರೈತರಿಗೆ ದಾನ ಮಾಡ್ತೇವೆ ಎಂದು ಡಿ.ಕೆ ಶಿವಕುಮಾರ್ ಗೆ ನಿಖಿಲ್ ಕುಮಾರಸ್ವಾಮಿ ಸವಾಲ್ ಹಾಕಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮಿಸ್ಟರ್ ಶಿವಕುಮಾರ್ ಅವರೇ ಸುಳ್ಳು ನಿಮ್ಮನೆ ದೇವರು. ವಿಷಯ ತಿಳಿದುಕೊಂಡು ಮಾತಾಡಿ. ಜಿಲ್ಲೆಯಲ್ಲಿ ಹೋಗಿ ತಾಲೂಕಿನ ರೈತರ ಮುಂದೆ ಅಪಪ್ರಚಾರ ಮಾಡಿದ್ರೆ ನಾವು ಕೈಕಟ್ಟಿ ಸುಮ್ನೆ ಕುಳಿತುಕೊಳ್ಳಲ್ಲ.ಅನಿತಾ ಕುಮಾರಸ್ವಾಮಿ ಅವರು ಜಮೀನು ಪರಿಹಾರ ಕೇಳಿ ಅರ್ಜಿ ಹಾಕಿದ್ರೆ, ಆ ಜಮೀನನ್ನ ರೈತರಿಗೆ ಬಡವರಿಗೆ ದಾನ ಮಾಡ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಡಿ.ಕೆ ಶಿವಕುಮಾರ್ ಅವರೇ ನಾವು ಅಲ್ಲಿ ಯಾವುದೇ ಶಿಕ್ಷಣ ಸಂಸ್ಥೆ, ದೊಡ್ಡ ದೊಡ್ಡ ಮಾಲ್ ಗಳನ್ನ ನಾವು ಕಟ್ಟಿಕೊಂಡಿಲ್ಲ. ಕಂಡ ಕಂಡವರ ಜಮೀನಿಗೆ ಹೋಗಿಲ್ಲ.  ಇನ್ನು ಬಹಳ ವಿಷಯವಿದೆ ರಾಮನಗರದಲ್ಲಿ ಬಂದು ಉತ್ತರ ಕೊಡ್ತೇನೆ ಎಂದು ಗುಡುಗಿದರು.
ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದಾರೆ. ಬಿಡದಿ ಟೌನ್ ಶಿಪ್ ವಿಚಾರವಾಗಿ ಎಷ್ಟು ಜನ ಹೋಗಿ ರೈತರ ಕಷ್ಟವನ್ನ ಕೇಳಿದ್ರಿ, ರೈತರ ಮನೆಗೆ ಯಾರದ್ರು ಹೋಗಿದ್ರಾ.? ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ ಶಿವಕುಮಾರ್ ಅವರಿಗೆ ಯಾವ ಅಧಿಕಾರಿ ಹೇಳಿದ್ರೋ ಗೊತ್ತಿಲ್ಲ. ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಇದೆ ಅಂತ ಡಿಕೆ ಶಿವಕುಮಾರ್ ಅವರಿಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್  ಗಾಳಿಯಲ್ಲಿ ಗುಂಡಿ ಹೊಡೆಯೋ ಅಭ್ಯಾಸ ಎಂದು ಲೇವಡಿ ಮಾಡಿದರು.
ಜಮೀನು ಖರೀದಿಸಿ 20ವರ್ಷದ ಮೇಲೆ ಆಗಿದೆ. ಬನ್ನಿಗಿರಿ ಮತ್ತು ಹೊಸೂರು ಬಿಡದಿಯಲ್ಲಿ. ಇದ್ರಲ್ಲಿ ಮುಚ್ಚು ಮರೆ ಏನು ಇಲ್ಲ ಇದು ಕೃಷಿ ಜಮೀನು. ದೇವೇಗೌಡರು ಕುಮಾರಣ್ಣ ಮೂಲತಃ ಕೃಷಿಕರು, ರೈತರು. ಕೇತಗನಹಳ್ಳಿ ಜಮೀನಿನ ಮೇಲೆ ಎಸ್ಐಟಿ ರಚನೆ ಮಾಡಿದ್ರಿ. ಕೊನೆಗೆ ಸುಪ್ರೀಂ ಕೋರ್ಟ್ ನಲ್ಲಿ ಏನಾಯ್ತು ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ರಿಯಲ್ ಎಸ್ಟೇಟ್ ದಂಧೆ ಮಾಡಲು ಬಿಬಿಎಂಪಿ ಪಂಚ ಪಾಲಿಕೆ
ರಿಯಲ್ ಎಸ್ಟೇಟ್ ದಂಧೆ ಮಾಡಲು ಬಿಬಿಎಂಪಿ ಪಂಚ ಪಾಲಿಕೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯನ್ನು ಡಿಕೆಶಿ ಗಾರ್ಬೇಜ್ ಸಿಟಿ ಮಾಡಿದ್ದಾರೆ. ಪಂಚ ಪಾಲಿಕೆಗಳಿಗೆ ಕಚೇರಿ ಮಾಡೋ ಮೊದಲು ನಗರದಲ್ಲಿ ಕಸ ಎತ್ತಿ. ಜಿಬಿಎ ಮಾಡಿದ್ರೆ ಬೆಂಗಳೂರು ಅಭಿವೃದ್ಧಿ ಆಗುತ್ತಾ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ಟಿಕೆಟ್ ವಿಚಾರ
ನಮ್ಮ ಮಿತ್ರಪಕ್ಷ ಬಿಜೆಪಿ ಜತೆ ನಮಗೆ ಆರೋಗ್ಯಕರ ಮಿತೃತ್ವ ಇದೆ. ನಾವು ಎರಡೂ ಪಕ್ಷಗಳು ಜನತೆಗೂಡಿ ಕೆಲಸ ಮಾಡ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಮುತ್ಸದ್ಧಿಗಳು. ಅವರು ಇತ್ತೀಚೆಗೆ ಅಭಿಮಾನದಿಂದ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದರು. ಇದರಿಂದ ಜೆಡಿಎಸ್ ಕಾರ್ಯಕರ್ತರು ಗೊಂದಲವಾಗಬಾರದು. ಬಿಜೆಪಿ ರಾಜ್ಯಾಧ್ಯಕ್ಷ ಅವರೇ ಅದಕ್ಕೆ ಸ್ಪಷ್ಟನೇ ಕೊಟ್ಟಿದ್ದಾರೆ ಎಂದು  ಹೇಳಿದರು.
ಡಿ.ಕೆ ಶಿವಕುಮಾರ್ ಅವರು ದೇವೇಗೌಡರ ಮೊಮ್ಮಗನಿಗೆ ಸೋಲಿಸಿದ್ದೇವೆ, ತಂತ್ರ ಮಾಡೋದು ನಮಗೂ ಗೊತ್ತಿದೆ  ಅಂದಿದ್ದಾರೆ. ಆದರೆ ನಾನು ಕಾರ್ಯಕರ್ತರಿಗಾಗಿ ಚನ್ನಪಟ್ಟಣ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಇವತ್ತು ಡಿಕೆಶಿ ಅವರು ತಮ್ಮ ಬೆನ್ನು ತಾವೇ ಬೆನ್ನು ತಟ್ಟಿಕೊಳ್ತಿದ್ದಾರೆ. ನಮಗೂ ಕಾಲ ಬರುತ್ತೆ, ಅಧಿಕಾರ ಶಾಶ್ವತ ಅಲ್ಲ ಎಂದು
ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ಜೆಡಿಎಸ್ ಎರಡು ಸ್ಥಾನಕ್ಕಿಂತ ಜಾಸ್ತಿ ಗೆಲ್ಲಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ
ನಿಮಗೆ ತಾಕತ್ತು ಧಮ್ಮು ಇದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ ನೋಡಿ. ಪ್ರಾದೇಶಿಕ ಪಕ್ಷ ಕಟ್ಟಿ ಕನಿಷ್ಟ ಎರಡಲ್ಲ ಒಂದು ಸ್ಥಾನ ತಗೊಳ್ಳಿ ನೋಡೋಣ. ಜೆಡಿಎಸ್ ಶಕ್ತಿ ಏನು ಅಂತ ಮುಂದಿನ ಚುನಾವಣೆಯಲ್ಲಿ ತೋರಿಸ್ತೇವೆ, ದಯವಿಟ್ಟು ಸ್ವಲ್ಪ ಸಹನೆ ಇರಲಿ ಎಂದು ಸಿದ್ದರಾಮಯ್ಯಗೆ ಹಾಗೂ ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಸವಾಲ್ ಹಾಕಿದರು.
ಡಿಕೆಶಿ ಟನೆಲ್ ರೋಡ್ ಕಾಮಗಾರಿ ವಿಚಾರ
ಕಮೀಷನ್ ಗಾಗಿ ಡಿಕೆಶಿ ಟನೆಲ್ ರೋಡ್ ಕಾಮಗಾರಿ ಮಾಡ್ತಿದ್ದಾರೆ. ಟೋಲ್ ಜಾಸ್ತಿ ಇರೋ ರಸ್ತೆಯಲ್ಲಿ ಶ್ರೀಮಂತರಷ್ಟೇ ಓಡಾಡಬೇಕು. ಈ ಸುರಂಗ ಮಾರ್ಗ ಯಾರಿಗೋಸ್ಕರ ಮಾಡ್ತಿದ್ದೀರಿ? ಡಿಕೆಶಿ ಅಣ್ಣಾ ಟನೆಲ್ ರೋಡ್ ನಲ್ಲಿ ಎಷ್ಟು ಕಮೀಷನ್ ತಗೊಳ್ತಿದೀಯಣ್ಣ?
ಯಾರಿಗೆ ಟೆಂಡರ್ ಕೊಡ್ತಿದ್ದೀಯಣ್ಣ? ಜನರ ಮುಂದೆ ಹೇಳಿ ಶ್ವೇತಪತ್ರ ಹೊರಡಿಸಿ ಎಂದು ಕಿಡಿಕಾರಿದರು.
ಬ್ಯಾಲೆಟ್ ಪೇಪರ್ ವಿಚಾರ
ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಲೆಟ್ ಪೇಪರ್ ತರಲು ಹೊರಟಿದೆ. ಕಾಂಗ್ರೆಸ್ ಪಕ್ಷ ಅನಾದಿ ಕಾಲಕ್ಕೆ ಹೋಗ್ತಿದೆ. ಎರಡು ಸಲ ಕಾಂಗ್ರೆಸ್ ಗೆದ್ದಿದ್ದು ಇವಿಎಂ ಮೂಲಕವೇ  ನಿಮಗೆ ಇವಿಎಂ ಬೇಡ ಅಂದ್ರೆ ರಾಜೀನಾಮೆ ಕೊಡಿ
ಡಿಸಿಎಂ ಅವರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ. ಕಾಂಗ್ರೆಸ್ ನಾಯಕರದ್ದು ಉದ್ಧಟತನದ ರಾಜಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
 ಯಶವಂತಪುರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ
ಇದಕ್ಕೂ ಮೊದಲು ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಆಗಮಿಸಿದ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರಿಗೆ ಕ್ಷೇತ್ರದ ಜನರು ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕುವ ಮೂಲಕ ಸ್ವಾಗತಿಸಿದರು. ನಂತರ  ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಬೈಕ್ ರ್ಯಾಲಿಯ ಮೂಲಕ ಬ್ಯಾಡರಹಳ್ಳಿ ಪೊಲೀಸ್ ಠಾಣೆ, ಗೊಲ್ಲರಹಟ್ಟಿ, ಕಡಬಗೆರೆ ಕ್ರಾಸ್, ಸೀಗೇಹಳ್ಳಿ ಗೇಟ್, ಚೆನ್ನೇನಹಳ್ಳಿ, ವನಗಾಗೇರಿಯ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದರು.
ಇನ್ನು ದಾರಿಯುದ್ದಕ್ಕೂ ಸಾರ್ವಜನಿಕರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕುವ ಮೂಲಕ ದೇವೇಗೌಡರಿಗೆ, ಕುಮಾರಣ್ಣನಿಗೆ ಜೆಡಿಎಸ್ ಪಕ್ಷಕ್ಕೆ ಜೈಕಾರ ಹಾಕಿ ಅದ್ದೂರಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನ  ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು,ಹೆಚ್.ಕೆ. ಕುಮಾರಸ್ವಾಮಿ ರವರು, ಮಾಜಿ ಶಾಸಕರಾದ ಅನ್ನಧಾನಿ, ಮಾಜಿ ವಿಧಾನಪರಿಷತ್ ಸದಸ್ಯರು, ತಿಪ್ಪೇಸ್ವಾಮಿ ರವರು,ಶರವಣ, ವಿವೇಕಾನಂದ ರವರು , ಮಾಜಿ ವಿಧಾನಪರಿಷತ್ ಸದಸ್ಯರಾದ ರಮೇಶ್ ಗೌಡ, ಗೊವಿಂದರಾಜು, ಹನಮಂತೆಗೌಡರು, ಸೇರಿದಂತೆ ಅನೇಕ ಪ್ರಮುಖ ಮುಖಂಡರು ಹಾಗೂ ಸಹಸ್ತ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾರ್ವಜನಿಕರು ಭಾಗಿಯಾಗಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";