ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸ್ವಪಕ್ಷದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧವೇ ಕಾಂಗ್ರೆಸ್ನ ಮುಸ್ಲಿಂ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ಜಮೀರ್ ವಿರುದ್ಧ “ಪಕ್ಷ ವಿರೋಧಿ” ಆರೋಪ
ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಉಪಾಧ್ಯಕ್ಷರಾದ ಒಬೈದುಲ್ಲಾ ಶರೀಫ್, ವೈ. ಸಯೀದ್ ಅಹ್ಮದ್ ಹಾಗೂ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೋಜ್ ಖಾನ್, ಜಮೀರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಉಪಚುನಾವಣೆಯ ವೇಳೆ ಪಕ್ಷದ ಗೆಲುವಿಗೆ ಶ್ರಮಿಸುವ ಬದಲು, ಜಮೀರ್ ಅವರು ಉದ್ದೇಶಪೂರ್ವಕವಾಗಿ ಮತದಾರರಲ್ಲಿ ಗೊಂದಲ ಸೃಷ್ಟಿಸಿ ಬಿಜೆಪಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ನಾಯಕರು ದೂರಿದ್ದಾರೆ.
“ಇಬ್ರಾಹಿಂ, ರೋಷನ್ ಬೇಗ್ ಹೋದ್ರು ಏನಾಯಿತು?”
ಒಬೈದುಲ್ಲಾ ಶರೀಫ್ ಮಾತನಾಡಿ, “ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಈ ಹಿಂದೆ ಸಿ.ಎಂ. ಇಬ್ರಾಹಿಂ ಮತ್ತು ರೋಷನ್ ಬೇಗ್ ಅವರಂತಹ ಪ್ರಭಾವಿ ನಾಯಕರು ಪಕ್ಷ ಬಿಟ್ಟು ಹೋದಾಗಲೂ ಕಾಂಗ್ರೆಸ್ಗೆ ಯಾವುದೇ ಹಾನಿಯಾಗಿಲ್ಲ. ಈಗ ಜಮೀರ್ ಅಹ್ಮದ್ ಖಾನ್ ಪಕ್ಷ ತೊರೆದರೂ ಕಾಂಗ್ರೆಸ್ಗೆ ಏನೂ ವ್ಯತ್ಯಾಸವಾಗುವುದಿಲ್ಲ,” ಎಂದು ನೇರವಾಗಿ ಸವಾಲು ಹಾಕಿದ್ದಾರೆ.
ದಾವಣಗೆರೆ ದಕ್ಷಿಣ ಸೋಲಿಗೆ ಮುಸ್ಲಿಂ ಮತಗಳ ವಿಭಜನೆಯೇ ಕಾರಣ?
ಏಪ್ರಿಲ್ 9ರಂದು ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರನ್ನು ದಾರಿತಪ್ಪಿಸಲಾಗಿದೆ. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ಮುಸ್ಲಿಂ ಮತಗಳು ವಿಭಜನೆಯಾಗುವಂತೆ ಮಾಡಲಾಗಿದೆ. ಈ ಕುತಂತ್ರದಿಂದಾಗಿ ಅಂತಿಮವಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಪದಾಧಿಕಾರಿಗಳು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಧಾರ್ಮಿಕ ಮುಖಂಡರನ್ನು ಎಳೆತಂದಿರುವ ಬಗ್ಗೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ನಡೆ ಏನು?
“ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲೇಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ,” ಎಂದು ಒಬೈದುಲ್ಲಾ ಶರೀಫ್ ತಿಳಿಸಿದ್ದಾರೆ. ಸಚಿವ ಜಮೀರ್ ವಿರುದ್ಧದ ಈ ಬಂಡಾಯ ಈಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.



