ಬೆಂಗಳೂರು,ಮಾ,4 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಕನ್ನಡ ಚಿತ್ರನಟ ದರ್ಶನ್, ಹಿರಿಯ ಚಿತ್ರನಟಿ ಭಾರತಿ ವಿಷ್ಣುವರ್ಧನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪ್ರಿಯದರ್ಶನ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ. ಪಿ ಎಸ್ ಹರ್ಷ ಮತ್ತು ಇತರರು ಭಾಗವಹಿಸಿದ್ದರು.
ಕನ್ನಡದ ಮೊಟ್ಟ ಮೊದಲ ವಾಕ್ ಚಿತ್ರ ಸತಿ ಸುಲೋಚನ 1934 ರ ಮಾರ್ಚ್ 3 ರಂದು ತೆರೆಕಂಡ ಸಂಸ್ಮರಣೆಯಲ್ಲಿ ಮಾರ್ಚ್ 3 ರನ್ನು ವಿಶ್ವ ಕನ್ನಡ ಚಲನಚಿತ್ರ ದಿನ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನು ಮುಂದೆ ಪ್ರತಿ ವರ್ಷ ಇದೇ ದಿನದಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಪ್ರಾರಂಭಿಸಲಾಗುವುದು ಎಂದರು.
ಹದಿಮೂರನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಇಂತಹ ಚಲನ ಚಿತ್ರೋತ್ಸವಗಳನ್ನು ಆಯೋಜಿಸಲು ಹಲವು ತಿಂಗಳುಗಳೇ ಬೇಕಾಗುತ್ತಿದ್ದವು. ಆದರೆ, ತಂತ್ರಜ್ಞಾನ, ಅದರಲ್ಲೂ ಅಂಕಿತ ( ಡಿಜಿಟಲ್ ) ತಂತ್ರಜ್ಞಾನ ಬೆಳೆದಿರುವ ಸಂದರ್ಭದಲ್ಲಿ ಅತ್ಯಲ್ಪ ಅವಧಿಯಲ್ಲಿ ಚಲನಚಿತ್ರೋತ್ಸವಗಳನ್ನು ಆಯೋಜಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.