ಬಳ್ಳಾರಿ: ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಕಳೆದ ರಾತ್ರಿ ಭೀಕರವಾಗಿ ಕೊಲೆಗೀಡಾಗಿದ್ದ ರಿಯಲ್ ಎಸ್ಟೇಟ್ ವ್ಯಾಪಾರಿ ಮೆಹಬೂಬ್ಭಾಷಾ ಹತ್ಯೆ ಪ್ರಕರಣವನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬೇಧಿಸಿದ್ದು, ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರಂಜಿತ್ಕುಮಾರ್ ಬಂಡಾರು ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಕಛೇರಿಯ ಸಭಾಂಗಣದಲ್ಲಿಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಜಿತ್ಕುಮಾರ್ ಬಂಡಾರು ಅವರು, ‘ರಿಯಲ್ ಎಸ್ಟೇಟ್ ವ್ಯಾಪಾರ-ವ್ಯವಹಾರದ ಸಂಬಂಧದ ದ್ವೇಷದಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದ್ದು ಮೂವರು ಆರೋಪಿಗಳಾದ ಅನ್ವರ್ಭಾಷ ಅಲಿಯಾಸ್ ಚಿಕನ್ ಅನ್ವರ್ ಹಾಗೂ ಅಲ್ತಾಫ್ ಹುಸೇನ್ ಅಲಿಯಾಸ್ ಮುಸ್ತಾಫ್ ಹುಸೇನ್ ಮತ್ತು ಸಿರಾಜ್ಭಾಷ ಎಂಬುವವರನ್ನು ಗ್ರಾಮೀಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.
ವೃತ್ತಿ-ವ್ಯವಹಾರದ ದ್ವೇಷಾಸೂಯೆಯಿಂದಲೇ ಕೊಲೆ ನಡೆದಿದೆ ಎನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಮಚ್ಚು ಮತ್ತು ಚಾಕುವಿನಿಂದ ದಾಳಿ ನಡೆಸಿ ಕೊಲೆಗೈಯಲಾಗಿದೆ. ಈ ಕೊಲೆಯ ಹಿಂದೆ ರಾಜಕೀಯ ಹಗೆತನವಾಗಲಿ, ದುರುದ್ದೇಶವಾಗಲಿ ಕಂಡುಬಂದಿಲ್ಲ, ರಿಯಲ್ ಎಸ್ಟೇಟ್ ವ್ಯವಹಾರವೇ ಕೊಲೆಗೆ ಕಾರಣವಾಗಿದೆ ಎಂದು ಗೊತ್ತಾಗಿದೆ. ಮೃತ ಮೆಹಬೂಬ್ ಭಾಷಾ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಯಶಸ್ಸು ಗಳಿಸಿದ್ದುದ್ದನ್ನು ಸಹಿಸಲಾಗಿರಲಿಲ್ಲವೆಂದು ತಿಳಿದುಬಂದಿದೆ. ಕೃತ್ಯ ನಡೆದ ಹಲವು ಗಂಟೆಗಳಲ್ಲಿಯೇ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಜಿಲ್ಲಾ ಎಸ್ಪಿ ರಂಜಿತ್ಕುಮಾರ್ ಬಂಡಾರು, ಎಎಸ್ಪಿ ಎಂ.ಎ.ನಟರಾಜ್ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಡಿವೈಎಸ್ಪಿ (ಸಿರುಗುಪ್ಪ ಉಪವಿಭಾಗ) ವೆಂಕಟೇಶ್ ನೇತೃತ್ವದಲ್ಲಿ ಬಳ್ಳಾರಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಬಿ.ನಿರಂಜನ್, ಕೌಲ್ಬಜಾರ್ ಠಾಣೆಯ ಪಿಐ ವಾಸುಕುಮಾರ್, ಮೋಕಾ ಪಿಎಸ್ಐ ಪರುಶುರಾಮ್, ಪಿ.ಡಿ.ಹಳ್ಳಿ ಠಾಣೆಯ ಪಿಎಸ್ಐ ಶಶಿಧರನಾಯಕ್ ಮತ್ತು ಗ್ರಾಮೀಣ ಠಾಣೆ ಸಿಬ್ಬಂದಿ ವರ್ಗದ ಹೆಚ್ಸಿಗಳಾದ ಸುಧಾಕರ್, ಮಹಂತೇಶ್, ಶರಣಪ್ಪ, ಪಿ.ಸಿ.ರಮೇಶ್ಬಾಬು, ಪಿ.ಡಿ.ಹಳ್ಳಿ ಠಾಣೆಯ ಹೆಚ್.ಸಿ.ದಾರಾಸಿಂಗ್ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.