ಅಧಿನಾಯಕಿ : ಸ್ತ್ರೀ ಸಂವೇದನೆಯ ಏಕ ವ್ಯಕ್ತಿ ಪ್ರಯೋಗ

·        ನಂಜುಂಡಪ್ಪ.ವಿ.

ಇದು ಆಧುನಿಕ ಮಹಿಳಾ ಕಾವ್ಯ.  ಅನಾದಿ ಕಾಲದಿಂದಲೂ ಮಹಿಳೆಯರನ್ನು ನೋಡುವ, ಮಹಿಳೆಯರ ಸ್ವಾತಂತ್ರ್ಯ ಧಿಕ್ಕರಿಸುವ, ಮಹಿಳೆಯರನ್ನು ನಡೆಸಿಕೊಳ್ಳುವ ಕುರಿತಾದ ಒಂದು ಕಾವ್ಯ ರೂಪಕ ಅಧಿನಾಯಕಿ. ಒಂದೂಕಾಲು ಗಂಟೆಯ ಏಕ ವ್ಯಕ್ತಿ ಪ್ರದರ್ಶನದಲ್ಲಿ ಮಹಿಳಾ ಸಮಸ್ಯೆಗಳ ನಾನಾ ಮುಖಗಳು, ಹಲವಾರು ವ್ಯಾಖ್ಯಾನಗಳು, ಅನೇಕ ಆಯಾಮಗಳು ಅನಾವರಣಗೊಳ್ಳುತ್ತವೆ.

 

ಈ ಕಥನದಲ್ಲಿ ಪುರಾಣ, ಇತಿಹಾಸ, ಸಮಕಾಲೀನ ವಿದ್ಯಾಮಾನಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಝರಿ ಝರಿಯಾಗಿ, ತೊರೆ ತೊರೆಯಾಗಿ ಹರಿದು ನದಿ, ಸಾಗರಗಳನ್ನು ಸೇರುವ ಹಾಗೆ ಕಥೆ ಸಾಗುತ್ತದೆ. ಸಮ ಸಮಾಜ ನಿರ್ಮಿಸುವ ವರೆಗಿನ ಹೋರಾಟದ ಹಾದಿಯನ್ನು ಈ ಏಕವ್ಯಕ್ತಿ ಪ್ರಾಕಾರ ಒಳಗೊಂಡಿದೆ. ಅಧಿನಾಯಕಿಯನ್ನು ಒಮ್ಮೆ ನೋಡಿದರೆ ಸ್ತ್ರೀ ಸಂವೇದನೆ  ನಮ್ಮ ಅಭಿಪ್ರಾಯಗಳು ಇನ್ನಷ್ಟು ಪಕ್ವಗೊಳ್ಳುತ್ತವೆ. ಗೌರವ ಭಾವನೆ ಗಟ್ಟಿಯಾಗುತ್ತದೆ.

ಇಂತಹ ಅಧಿನಾಯಕಿ ಪಾತ್ರಧಾರಿ ಲಕ್ಷ್ಮಿ ಕಾರಂತ್ ತಮ್ಮ ನಟನೆಯಲ್ಲಿ ಮಂತ್ರಮುಗ್ದಗೊಳಿಸುತ್ತಾರೆ. ಅವರಲ್ಲಿ ಉತ್ತಮ ಕಲಾವಿದೆಗೆ ಬೇಕಾದ ಗುಣಲಕ್ಷಣಗಳಿದ್ದು, ಇದೇ ರೀತಿಯ ಸಿದ್ಧತೆ, ಬದ್ಧತೆಯನ್ನು ಮೈಗೂಡಿಸಿಕೊಂಡರೆ ಅವರು ರಂಗಭೂಮಿಗೆ ಆಸ್ತಿಯಾಗಬಲ್ಲರು.

ಹೆಣ್ಣು ಸದಾ  ಮಿತಿಯಲ್ಲೇ ಇರಬೇಕು ಎಂದು ಸಮಾಜ ಅವಳನ್ನು ಕೂಡಿಟ್ಟಿದೆ. ಅವಳೆಷ್ಟೇ ಸಾಧನೆಗೈದರೂ, ಮನೆ-ಸಮಾಜ, ಹೀಗೆ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆ ಮಾತು -“ಅವಳು ಹೆಣ್ಣು”.

 

ನಾಗರಿಕತೆ ಹುಟ್ಟಿದಾಗಿನಿಂದ, ರಾಜರ ಆಳ್ವಿಕೆ, ರಾಣಿಯರ ಕಾಲದಿಂದಲೂ ಹೆಣ್ಣು ಬರಿ ಭೋಗದ ವಸ್ತು. ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಗಂಡಿನ ದಾರ್ಷ್ಟ್ಯದ ಪರಕಾಷ್ಠೆಯಾಗಿದೆ. ಹೀಗೆ ಈ ಎಲ್ಲವನ್ನೂ ಎಳೆ ಎಳೆಯಾಗಿ, ನವಿರಾಗಿ, ಅತ್ಯಂತ ಸಮರ್ಥವಾಗಿ ನಿರೂಪಿಸಿದ್ದಾರೆ ರಂಗ ಕರ್ಮಿ, ನಿರ್ದೇಶಕ ಡಾ. ಬೇಲೂರು ರಘುನಂದನ್.  

ಚರಿತ್ರೆ ಅದೆಷ್ಟೋ ಮಹಿಳೆಯರ ಸಾಧನೆಗಳನ್ನು ಮರೆಮಾಚಿದೆ. ಸ್ತ್ರೀ ಎಷ್ಟೇ ಎತ್ತರಕ್ಕೇರಿದರೂ, ಅಡುಗೆಮನೆಗೆ ಸೀಮಿತಗೊಳಿಸಲಾಗಿದೆ. ತನ್ನವರನ್ನು ಸದಾ ಓಲೈಸುತ್ತಲೇ ಬದುಕುವ ದೌರ್ಭಾಗ್ಯ ಹೆಣ್ಣಿನದ್ದು. ಸಂಸದೀಯ ಪ್ರಜಾತಂತ್ರ ಜನ್ಮ ತಳೆದ ಈ ನಾಡಿನಲ್ಲಿ, ಅದೂ ಬಸವಣ್ಣನ ಚಿಂತಕರ ಚಾವಡಿಯಲ್ಲಿ ಮಹಿಳೆಯರಿಗೆ ಆದ್ಯತೆ ಇತ್ತು. ವಿಜಯಪುರ ಸುತ್ತಮುತ್ತಲಿನ ಪ್ರದೇಶವನ್ನು ಈಗಲೂ ಅಖಂಡ ಶರಣ ಶರಣೆಯರ ನಾಡು ಎಂದು ಕರೆಯುತ್ತಾರೆ. ಆದರೆ ಸ್ವಾತಂತ್ರ್ಯೋತ್ತರ ಸರ್ಕಾರದ ಸಂಪುಟದಲ್ಲಿ ಮಹಿಳೆಯರಿಗೆ ಎಷ್ಟು ಪ್ರಾತಿನಿಧ್ಯವಿದೆ?. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಇನ್ನೂ ಯಾಕೆ ಮರಿಚಿಕೆಯಾಗಿದೆ!!. ಸಮಾನತೆಯ ಕಾಲದ ಅಕ್ಕನ ಚಳುವಳಿ, ಪ್ರಜಾಪ್ರಭುತ್ವ ಬಲವಾಗಿ ನೆಲೆಯೂರಿದ ಈಗಿನ ಸಂದರ್ಭದಲ್ಲೂ ಸ್ತ್ರೀ ಪ್ರಾತಿನಿಧ್ಯೆ ಯಾಕಿನ್ನು ಕಾವು ಪಡೆದುಕೊಂಡಿಲ್ಲ?.

ಹೀಗೆ ಈ ಎಲ್ಲಾ ಸ್ತ್ರೀ  ಪರ ವಿಚಾರಧಾರೆಗಳನ್ನು ಮುಂದಿಟ್ಟು, ಅವರಲ್ಲೊಂದು ಜಾಗೃತಿಯ ಪ್ರಶ್ನೆ ಮೂಡಿಸುವುದು, ಅಧಿನಾಯಕಿ ಏಕ ವ್ಯಕ್ತಿ ಪ್ರಯೋಗದ ಉದ್ದೇಶ. ಕಿಟಕಿಗಳಲ್ಲೇ ಹೆಣ್ಣು ಕಂಡ ಜಗತ್ತನ್ನು, ಬಹಳ ಸುಂದರವಾಗಿ ಕಟ್ಟುಕೊಟ್ಟಿದೆ ಈ ತಂಡ. ನೇಪಥ್ಯದ ಹಿಂದೆ, ಭೂತ-ವರ್ತಮಾನಗಳೊಂದಿಗೆ ತೂಗುಯ್ಯಾಲೆ ಆಡುವ ಕಥಾವಸ್ತು, ಕಥೆಗಳ ಮೂಲಕವೇ ಅರಿವಿಗೆ ಓರೇ ಹಚ್ಚುತ್ತದೆ. ನಿಜಕ್ಕೂ ಇದೊಂದು ಅದ್ಭುತ ಪ್ರಯೋಗ

ಆಗಸ್ಟ್‌ 26 ರಂದು ಚಾಮರಾಜನಗರದ ವರನಟ ಡಾ. ರಾಜ್‌ ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ

ಮತ್ತು

 

ಆಗಸ್ಟ್‌ 27 ರಂದು ಸಂಜೆ 6.30 ಗಂಟೆಗೆ, ಮೈಸೂರು, ರಮಾಗೋವಿಂದ ರಂಗಮಂದಿರ, ರಾಮಕೃಷ್ಣ ನಗರ, ಮೈಸೂರು 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top