ಬೆಂಗಳೂರು: ಕೇಂದ್ರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಡಿ ಬರುವ ದಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾದಿಂದ ಬೆಂಗಳೂರಿನಲ್ಲಿ ಶುಕ್ರವಾರದಿಂದ ಎರಡು ದಿನಗಳ 48ನೇ ಕಂಪನಿ ಸೆಕ್ರೇಟರಿಗಳ ಪ್ರಾದೇಶಿಕ ಸಮಾವೇಶ ನಡೆಯಲಿದೆ.
ಸಾಂಸ್ಥಿಕ ವಲಯದಲ್ಲಿ ಕಂಪನಿ ಸೆಕ್ರೇಟರಿಗಳ ಪಾತ್ರ ಕುರಿತು ಸಮ್ಮೇಳನದಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ ತಿಳಿಸಿದ್ದಾರೆ.
ನಗರದ ಕೋಣನಕುಂಟೆಯ ಪ್ರಿಸ್ಟೀಜ್ ಶ್ರೀ ಹರಿ ಖೋಡೆ” ಸಭಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮನ್ ನಾರಾಯಣ್ ಸಮಾವೇಶ ಉದ್ಘಾಟಿಸಲಿದ್ದಾರೆ. ತಪಾಸಣೆ, ತನಿಖೆ ಮತ್ತು ವಿಚಾರಣೆ ಕುರಿತ ತಾಂತ್ರಿಕ ಸಮಾವೇಶದಲ್ಲಿ ದೆಹಲಿಯ ಐಸಿಎಸ್ಐ ಮಾಜಿ ಅಧ್ಯಕ್ಷ ರಂಜೀತ್ ಪಾಂಡೆ, ಪುಣೆ ಐಸಿಎಸ್ಐ ಮಾಜಿ ಅಧ್ಯಕ್ಷ ದೇವೇಂದ್ರ ವಿ ದೇಶಪಾಂಡೆ ಭಾಗವಹಿಸಲಿದ್ದಾರೆ.
“ಕಂಪೆನಿ ಸೆಕ್ರೇಟರಿಗಳ ವೃತ್ತಿ ಮತ್ತು ಭವಿಷ್ಯ ಕುರಿತ ಸಮಾವೇಶದಲ್ಲಿ ಬೆಂಗಳೂರು ಐಸಿಎಸ್ಐ ಮಾಜಿ ಅಧ್ಯಕ್ಷ ನಾಗೇಂದ್ರ ಡಿ ರಾವ್, ಮಾಜಿ ಉಪಾಧ್ಯಕ್ಷರಾದ ದೇವಿಕಾ ಸತ್ಯನಾರಾಯಣ ಮಾತನಾಡಲಿದ್ದಾರೆ. “ಮಾರ್ಗಗಳ ಮರು ವ್ಯಾಖ್ಯಾನ” ಕುರಿತು ಬೆಂಗಳೂರು ಐಸಿಎಸ್ಐ ಮಾಜಿ ಅಧ್ಯಕ್ಷ ಜೆ.ಸುಂದರೇಶನ್, ದೀವಾಳಿತನ, ಮೌಲ್ಯ ವರ್ಧನೆ ಕುರಿತು ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ ಅವರು ಮಾತನಾಡಲಿದ್ದಾರೆ.
“ಬಂಡವಾಳ ಮಾರುಕಟ್ಟೆಗಳಲ್ಲಿ ಕಂಪೆನಿ ಸೆಕ್ರೇಟರಿಗಳ ನಿರ್ಣಾಯಕ ಮಾರ್ಗದರ್ಶನ” ಕುರಿತು ಐಸಿಎಸ್ಐ ಬೆಂಗಳೂರು ಚಾಪ್ಟರ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಅವರು ಬೆಳಕು ಚೆಲ್ಲಿಲಿದ್ದಾರೆ