ಬೆಂಗಳೂರು : ವಿಶ್ವದ ಉಳಿವಿಗಾಗಿ, ಪ್ರಕೃತಿ ಮತ್ತು ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ರಾಜ್ಯಮಟ್ಟದ ಪರಿಸರ ಪರಿಣಾಮ ಪರಾಮರ್ಶನಾ ಪ್ರಾಧಿಕಾರ (ಎಸ್.ಇ.ಐ.ಎ.ಎ) ಮತ್ತು ರಾಜ್ಯ ಮಟ್ಟದ ತಜ್ಞರ ನಿಷ್ಕರ್ಶಾ ಸಮಿತಿ (ಎಸ್.ಇ.ಎ.ಸಿ.) ಈ ಕಾರ್ಯವನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಂದು ಈ ಎರಡೂ ಪರಿಸರ ಸಮಿತಿಗಳಿಗೆ ನೇಮಕಗೊಂಡಿರುವ ನೂತನ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಪ್ರಥಮ ಪರಿಚಯಾತ್ಮಕ ಸಭೆ ನಡೆಸಿದ ಅವರು, ಜೀವನ ಮತ್ತು ಜೀವನೋಪಾಯ ಎರಡೂ ಮುಖ್ಯವಾಗಿದೆ. ರಾಜ್ಯದ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಆಗಬೇಕು. ಹೊಸ ಕೈಗಾರಿಕೆ, ಉದ್ದಿಮೆಗಳು ಬರಬೇಕು. ಆದರ ಜೊತೆಗೆ ಪ್ರಕೃತಿ, ಪರಿಸರ, ಅರಣ್ಯ ಉಳಿಯಬೇಕು. ಈ ನಿಟ್ಟಿನಲ್ಲಿ ಎರಡೂ ಕಾಯಗಳು ತಮ್ಮ ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಎಸ್.ಇ.ಐ.ಎ.ಎ ಮತ್ತು ಎಸ್.ಇ.ಎ.ಸಿಯಿಂದ ನವೋದ್ಯಮಿಗಳ, ಉದ್ದಿಮೆದಾರರ ಅಥವಾ ಸಾರ್ವಜನಿಕರ ಶೋಷಣೆ ಆಗಬಾರದು, ಈ ಎರಡೂ ಪ್ರಾಧಿಕಾರ ಸರ್ಕಾರಕ್ಕೆ ಮತ್ತು ಇಲಾಖೆಗೆ ಖ್ಯಾತಿ, ಕೀರ್ತಿ ತರುವ ರೀತಿಯಲ್ಲಿ ಹೆಚ್ಚು ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಪ್ರವರ್ಗದ ಕೈಗಾರಿಕೆಗಳ ಕುರಿತಂತೆ ಹಾಗೂ ಪ್ರಾಧಿಕಾರ ಮತ್ತು ನಿರ್ಷರ್ಶಾ ಸಮಿತಿ ಕಾರ್ಯ ಮತ್ತು ಜವಾಬ್ದಾರಿ ಹಾಗೂ ಕಾಯಿದೆ, ನಿಯಮಗಳ ಬಗ್ಗೆ ನೂತನ ಸದಸ್ಯರಿಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.
ಎಸ್.ಸಿ.ಐ.ಎ.ಎ. ಅಧ್ಯಕ್ಷ ಬಿ. ಗುರುಪ್ರಸಾದ್, ಎಸ್.ಇ.ಎಸ್.ಸಿ. ಅಧ್ಯಕ್ಷ ಎ.ಎನ್. ಮಹೇಶ್ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಮತ್ತಿತರರು ಪಾಲ್ಗೊಂಡಿದ್ದರು.