ಬಳ್ಳಾರಿ: ಆಹಾರ ಧಾನ್ಯಗಳ ಕಮಿಷನ್ ಹೆಚ್ಚಿಸಬೇಕು. ನೆಟ್ವವರ್ಕ್ ಸರ್ವರ್ ಗಳನ್ನು ಹೆಚ್ಚಿಸಬೇಕು. ಬಾಕಿ ಇರುವ ಕಮಿಷನ್ ಹಣವನ್ನು ಪೂರ್ಣವಾಗಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ ಮೀನಳ್ಳಿ ತಾಯಣ್ಣ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜ.16ರಂದು ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಿರಂತರವಾಗಿ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದೇವೆ. ಸರ್ಕಾರದ ವಿರುದ್ಧ ಘೇರಾವುಗಳನ್ನು ನಡೆಸುತ್ತಿದ್ದೇವೆ. ಆದರೆ ಯಾವ ಸರ್ಕಾರವೂ ನಮ್ಮ ಸಮಸ್ಯೆಗಳತ್ತ ಗಮನ ಹರಿಸಿಲ್ಲ. ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡುತ್ತವೆ ಹೊರತು ಅವುಗಳಿಗೆ ಪರಿಹಾರ ಸೂಚಿಸುತ್ತಿಲ್ಲ. ಎಷ್ಟು ದಿನ ಅಂಥಾ ಆಶ್ವಾಸನೆಯಲ್ಲಿ ಬದುಕಬಹುದು? ಎಂದು ಪ್ರಶ್ನಿಸಿದರು.
ಗೌರವಧನದ ಜೊತೆಗೆ ಇತರ ಆದಾಯದ ಮೂಲಗಳು ಮಾರಾಟಗಾರರಿಗೆ ಲಭ್ಯವಾಗುವಂತೆ ಮಾಡಬೇಕು. ವೃದ್ಧ ಫಲಾನುಭವಿಗಳಿಗೆ ಕೈಯಿಂದ ಪಡಿತರ ನೀಡುವ ವ್ಯವಸ್ಥೆ ಆಗಬೇಕು. ಎನ್.ಎಸ್.ಎಸ್.ಎ ಕಮಿಷನ್ ಮಾಸಿಕ ಮುಂಗಡ ಪಾವತಿಯನ್ನು ಖಚಿತಪಡಿಸಿಕೊಳ್ಳಬೇಕು. ಆಹಾರ ಧಾನ್ಯಗಳ ಹೊರತಾಗಿ ಬೆಳೆಕಾಳುಗಳು ಎಣ್ಣೆ ಮತ್ತು ಸಕ್ಕರೆಯ ಸಬ್ಸಿಡಿ ದರಗಳು ಇರಬೇಕು. ಕೇಂದ್ರ ಆಹಾರ ಸಚಿವರ ಶಿಫಾರಸ್ಸಿನಂತೆ ರಿಜಿಸ್ಟರ್ಗಳ ನಿರ್ವಹಣೆ ನಿಲ್ಲಿಸಬೇಕು. ಕೊರೋನಾದಲ್ಲಿ ಮೃತಪಟ್ಟ ವಿತರಕರ ಅವಲಂಬಿತರಿಗೆ ರಾಜಸ್ಥಾನ ಮಾದರಿಯಲ್ಲಿ ಪರಿಹಾರ ನೀಡಬೇಕು. ಅನುಕಂಪದ ಸಮಸ್ಯೆಯನ್ನು ಜಾರಿಯಲ್ಲಿಟ್ಟುಕೊಂಡು ಪರವಾನಿಗೆ ನೀಡಲು ಆದೇಶ ನೀಡಬೇಕು ಎಂದು ನ್ಯಾಯಬೆಲೆ ಅಂಗಡಿ ವಿತರಕರ ಸಂಘವು ಒತ್ತಾಯಿಸುತ್ತಿದೆ ಎಂದು ಮೀನಳ್ಳಿ ತಾಯಣ್ಣ ತಿಳಿಸಿದರು.