ರಾಜ್ಯದ 1805 ಶಾಲೆಗಳಲ್ಲಿ ಭ್ರಷ್ಟಾಚಾರ ವಿರುದ್ಧ ಜನ ಜಾಗೃತಿ ಮೂಡಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ
ಬೆಂಗಳೂರು : ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ ಮತ್ತು ಭ್ರಷ್ಟಾಚಾರ ವಿರುದ್ಧದ ಜನ ಜಾಗೃತಿ ಮುಂದುವರೆಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ, ಈ ವರೆಗೆ ರಾಜ್ಯದ 1804 ಶಾಲೆಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಜೆಪಿ ನಗರದ 8 ಹಂತದ ಪೂರ್ಣ ವಿಕಾಸ ವಿದ್ಯಾಲಯದದಲ್ಲಿ 1805 ನೇ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರೇರಣಾದಾಯಕವಾಗಿ ಮಾತನಾಡಿದರು.
ಜೆಪಿ ನಗರದ ಪಿವಿವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ “ಪೂರ್ಣನವ” ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಜಸ್ಟಿಸ್ ಸಂತೋಷ್ ಹೆಗ್ಡೆ,ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮಕ್ಕಳನ್ನು ಅಣಿಗೊಳಿಸಬೇಕು. ಪ್ರಾಮಾಣಿಕತೆ,ನೈತಿಕತೆಯಿಂದ ಬದುಕುವುದನ್ನು ಕಲಿಸಬೇಕು ಎಂದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ತಮಗೆ ಭ್ರಷ್ಟಾಚಾರ ಇಷ್ಟೊಂದು ದೊಡ್ಡ ಪಿಡುಗು ಎಂಬ ಅರಿವಿರಲಿಲ್ಲ. ಆದರೆ ಲೋಕಾಯುಕ್ತ ನ್ಯಾಯಮೂರ್ತಿಯಾದ ನಂತರ ಕಾರ್ಯಾಂಗ ವ್ಯವಸ್ಥೆಯಲ್ಲಿ ಇದು ಹೇಗೆ ದೊಡ್ಡ ಪಿಡುಗಾಗಿದೆ ಎಂಬ ಅರಿವು ಮೂಡಿತು. ಈ ಕಾರಣದಿಂದಲೇ ವ್ಯವಸ್ಥೆಯನ್ನು ಶುದ್ಧಿಗೊಳಿಸಲು ಸಾಕಷ್ಟು ಕೆಲಸ ಮಾಡಲು ಸಾಧ್ಯವಾಯಿತು. ಲಂಚಗುಳಿತನಕ್ಕೆ ಕಡಿವಾಣ ಹಾಕಲು ಮುಂದಿನ ಪೀಳಿಗೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಪೂರ್ಣ ವಿಕಾಸ ವಿದ್ಯಾಲಯದ ಅಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿ ಅತ್ಯಂತ ಅಗತ್ಯವಾಗಿದೆ. ಶಾಲೆಯಲ್ಲಿ ಜೀವನ ಕೌಶಲ್ಯ ಕಲಿಕೆಗೆ ಒತ್ತು ನೀಡಿದ್ದು, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಇದನ್ನು ವಿದ್ಯಾರ್ಥಿ ಸಮುದಾಯ ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೂರ್ಣ ವಿಕಾಸ ವಿದ್ಯಾಲಯದ ಸಿಇಒ ಎಂ. ವಿನೀತ, ಪ್ರಾಂಶುಪಾಲರಾದ ಬಿ.ಟಿ. ಉಷಾ ಮಂಜುನಾಥ್, ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕ ಶ್ರಾವಣ ಲಕ್ಷ್ಮಣ್ ಮತ್ತಿತರರು ಪಾಲ್ಗೊಂಡಿದ್ದರು.