ಟಿಬಿ ಡ್ಯಾಂ ಆವರಣಕ್ಕೆ ಕ್ರಸ್ಟ್ ಗೇಟ್ ತಂದರೂ ಅಳವಡಿಕೆ ಇಲ್ಲ! ಗೇಟ್ ಅಳವಡಿಕೆ ಯಾವಾಗ?
ಜೂನ್ ತಿಂಗಳಲ್ಲೇ 19ನೇ ಕ್ರಸ್ಟ್ಗೇಟ್ ಬದಲಿ ಮಾಡುವುದಾಗಿ ಹೇಳಿಕೊಂಡು ಬಂದಿದ್ದ ಟಿಬಿ ಮಂಡಳಿ, ಗೇಟ್ನ್ನು ಡ್ಯಾಂ ಆವರಣಕ್ಕೆ ತಂದ ದಿನ ಡ್ಯಾಂ ಸಂಗ್ರಹ ಮಟ್ಟ ಆಧರಿಸಿ ಕೆಲಸ ಆರಂಭಿಸುವುದು ಅಸಾಧ್ಯವೆಂದು ಹೇಳಿ ಮುಂದಿನ ಅಕ್ಟೋಬರ್ ಅಥವಾ ನವೆಂಬರ್ ಎಂದಿತ್ತಾದರೂ, ಈಗ ಡ್ಯಾಂ ನೀರಿನ ಮಟ್ಟ ಇಳಿದ ಬಳಿಕ ಗೇಟ್ ಕೂರಿಸಲು ಸಾಧ್ಯ ಎನ್ನುತ್ತಿದೆ.
ಹೈಲೈಟ್ಸ್:
ಗದಗದಲ್ಲಿ ನಿರ್ಮಾಣಗೊಂಡಿರುವ 19ನೇ ಕ್ರಸ್ಟ್ಗೇಟ್
ವಿನಾಕಾರಣ ಕಾಲಹರಣ ಮಾಡಿದ ಟಿಬಿ ಮಂಡಳಿ
ಗೇಟ್ ಅಳವಡಿಕೆ ಮಾಡಲೇಬೇಕೆಂದು ತಜ್ಞರು ಸಲಹೆ ನೀಡಿದರೂ ವಿಳಂಬ
ತುಂಗಭದ್ರಾ ಆವರಣಕ್ಕೆ ಬಂದಿರುವ 19 ನೇ ಕ್ರಸ್ಟ್ಗೇಟ್
ತುಂಗಭದ್ರಾ ಆವರಣಕ್ಕೆ ಬಂದಿರುವ 19 ನೇ ಕ್ರಸ್ಟ್ಗೇಟ್
ವಿಜಯನಗರ (ಹೊಸಪೇಟೆ) : ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ದುರಸ್ತಿ ವರ್ಷ ಕಳೆದರೂ ಆಗಿಲ್ಲ. ಟೆಂಡರ್ ಪ್ರಕ್ರಿಯೆ, ತಜ್ಞರ ಅಭಿಪ್ರಾಯ, ಅನುಮತಿ, ಹೀಗೆ ಹತ್ತಾರು ಕಾರಣ ಮುಂದಿಟ್ಟುಕೊಂಡು 19 ನೇ ಕ್ರಸ್ಟ್ಗೇಟ್ ಅಳವಡಿಕೆ ಮಾಡುವಲ್ಲಿ ತುಂಗಭದ್ರಾ ಮಂಡಳಿ ಈ ವರ್ಷ ವಿಫಲವಾಗಿದೆ.
105.788 ಟಿಎಂಸಿ ಸಾಮರ್ಥ್ಯ:105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಟಿಬಿ ಡ್ಯಾಂ ನಂಬಿಕೊಂಡು ರಾಜ್ಯದ ಕೊಪ್ಪಳ ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿಯಲ್ಲಿ ರೈತರು ಜೀವನ ನಡೆಸುತ್ತಿದ್ದಾರೆ. 2024 ರ ಆಗಸ್ಟ್ 10 ರಂದು ರಾತ್ರಿ ಡ್ಯಾಂನ ಗರಿಷ್ಠ ಸಂಗ್ರಹ ಮಟ್ಟ 1633 ಅಡಿ ದಾಖಲಾಗಿದ್ದ ದಿನವೇ 19 ನೇ ಕ್ರಸ್ಟ್ಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ 40 ಟಿಎಂಸಿ ನೀರು ಪೋಲಾದ ಬಳಿಕ ವಾರದೊಳಗೆ ಡ್ಯಾಂ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಸ್ಟಾಪ್ಲಾಗ್ ಕೂರಿಸಿ ನೀರುಳಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಗೇಟ್ ಅಳವಡಿಕೆ ಯಾವಾಗ?:
ಹೊಸ ಗೇಟ್ನ್ನು 40 ಟಿಎಂಸಿ ನೀರು ಸಂಗ್ರಹಕ್ಕೂ ಮುನ್ನವೇ ಅಳವಡಿಸಬೇಕಿತ್ತು. ಆದರೆ, ಅಳವಡಿಸದ ಕಾರಣ ಈ ಬಾರಿ ಕೇವಲ 80 ಟಿಎಂಸಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಹೀಗಿರುವಾಗ ಅಕ್ಟೋಬರ್-ನವೆಂಬರ್ ವೇಳೆ ಗೇಟ್ ಬದಲಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಈ ವೇಳೆ ಈ ಹಿಂದಿನ ವರ್ಷಗಳಲ್ಲಿ ಡ್ಯಾಂನಲ್ಲಿ 80 ರಿಂದ 90 ಟಿಎಂಸಿಗೂ ಅಧಿಕ ನೀರಿನ ಸಂಗ್ರಹ ಮತ್ತು ಒಳಹರಿವು ಇತ್ತು. ಈ ಕಾರಣಕ್ಕೆ ಮುಂದಿನ ಬೇಸಿಗೆಗೆ 19ನೇ ಕ್ರಸ್ಟ್ಗೇಟ್ ಮತ್ತು ಉಳಿದ ಗೇಟ್ ಬದಲಿಸಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದೇ ಕಂಪನಿಗೆ ಗುತ್ತಿಗೆ:
19 ನೇ ಕ್ರಸ್ಟ್ಗೇಟ್ ಗುತ್ತಿಗೆ ಪಡೆದ ಕಂಪನಿ ಗದಗದಲ್ಲಿ ನಿರ್ಮಿಸಿರುವ ಗೇಟ್ನ 5 ತುಂಡುಗಳನ್ನು ಇತ್ತೀಚೆಗೆ ಡ್ಯಾಂ ಆವರಣಕ್ಕೆ ತಂದು ಇಳಿಸಿದೆ. ಅಹಮದಾಬಾದ್ನ ಹಾರ್ಡವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿ ಗುತ್ತಿಗೆ ಪಡೆದು ಸುಮಾರು ಮೂರು ತಿಂಗಳ ಬಳಿಕ ಕ್ರಸ್ಟ್ಗೇಟ್ ನಿರ್ಮಿಸಿದ್ದು, 49 ಟನ್ ತೂಕವಿದೆ. ಉಳಿದ 32 ಗೇಟ್ಗಳು ಸೇರಿ ಎಲ್ಲ33 ಗೇಟ್ಗಳನ್ನು ಬದಲಿಸುವ ಗುತ್ತಿಗೆಯನ್ನು ಇದೇ ಕಂಪನಿ ಪಡೆದುಕೊಂಡಿದೆ.
ತುಂಗಭದ್ರಾ ಜಲಾಶಯದ ಸದ್ಯದ ನೀರಿನ ಮಟ್ಟದಲ್ಲಿ ಕ್ರಸ್ಟ್ಗೇಟ್ ಬದಲಿ ಅಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ನೀರಿನ ಮಟ್ಟ ಇಳಿಕೆಯಾದ ಬಳಿಕ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಸಾಧ್ಯ.