ಧ್ರುವ ಸರ್ಜಾಗೆ ಕ್ಷಮೆ ಕೇಳಿದ ಮಡೆನೂರು ಮನು : ಆಡಿಯೋ ವಿವಾದ !
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಸದ್ಯ ಸಹ ನಟಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಮಧ್ಯೆ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿ ಮತ್ತೊಂದಿಷ್ಟು ವಿವಾದಕ್ಕೆ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಅವರಿಗೆ ನಟ ಮನು ಕ್ಷಮೆ ಕೇಳಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಏನಂದ್ರು? ಮುಂದೆ ಓದಿ.
ಹೈಲೈಟ್ಸ್:
ಧ್ರುವ ಸರ್ಜಾಗೆ ಕ್ಷಮೆ ಕೇಳಿ ಮಡೆನೂರು ಮನು ವಾಯ್ಸ್ ನೋಟ್ ಕಳುಹಿಸಿದ್ದಾರೆ
“ನಾನು ತಪ್ಪು ಮಾಡಿಲ್ಲ. ಅವರು ನನ್ನಿಂದ ತಪ್ಪು ಮಾಡಿಸಿದ್ದಾರೆ” ಎಂದ ಮನು
ಕ್ಷಮೆ ಕೇಳಿದ ಮಡೆನೂರು ಮನುಗೆ ನಟ ಧ್ರುವ ಸರ್ಜಾ ಹೇಳಿದ್ದೇನು?
ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹ ನಟಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಅವರು, ಸದ್ಯ ಜಾಮೀನ ಮೇಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಈ ನಡುವೆ ಅವರದ್ದು ಎನ್ನಲಾದ ಒಂದು ಆಡಿಯೋ ಕ್ಲಿಪ್ ವೈರಲ್ ಆಗಿ, ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಶಿವರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಹೆಸರುಗಳನ್ನು ಆಡಿಯೋ ಕ್ಲಿಪ್ನಲ್ಲಿ ಉಲ್ಲೇಖ ಮಾಡಲಾಗಿತ್ತು. ಇದೀಗ ಜೈಲಿನಿಂದ ಹೊರಗೆ ಬಂದಿರುವ ಮಡೆನೂರು ಮನು, ಧ್ರುವ ಸರ್ಜಾ ಅವರಿಗೆ ಕ್ಷಮೆ ಕೇಳಿದ್ದಾರೆ. ಆದರೆ, ಧ್ರುವ ಸರ್ಜಾ ಏನಂದ್ರು?
ವಾಯ್ಸ್ ನೋಟ್ ಕಳಿಸಿದ ಮನು
ಧ್ರುವ ಸರ್ಜಾ ಅವರಿಗೆ ವಾಯ್ಸ್ ನೋಟ್ ಕಳಿಸಿರುವ ಮಡೆನೂರು ಮನು, “ನಾನು ಸತ್ಯ ಹೇಳಬೇಕೆಂದರೆ, ನನ್ನ ತಾಯಿಯ ಮೇಲೆ ಆಣೆ, ನನ್ನ ಕಲೆಯ ಮೇಲೆ ಆಣೆ, ನಾನು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಅಣ್ಣಾ, ಅವರು ನನ್ನಿಂದ ತಪ್ಪು ಮಾಡಿಸಿದ್ದಾರೆ. ಅವರೆಲ್ಲಾ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾವನ್ನು ಕೊಂದರು. ಮುಂದೆ ಏನಾಗುತ್ತದೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ನನಗೆ ಯಾರ ಸಹವಾಸವೂ ಬೇಡ
“ಎಲ್ಲರೂ ಬ್ಯಾನ್ ಅಂತೆಲ್ಲಾ ಹೇಳುತ್ತಿದ್ದಾರೆ. ನೀವೆಲ್ಲಾ ಮನಸ್ಸು ಮಾಡಿದರೆ, ನಿಜವಾಗಿಯೂ ನಾನು ನನ್ನ ಜೀವನವನ್ನು ಕಟ್ಟಿಕೊಳ್ಳುತ್ತೇನೆ. ಯಾಕೆಂದರೆ ನಾನು ಕಲೆಯನ್ನೇ ನಂಬಿ ಬಂದಿದ್ದೇನೆ. ಅಣ್ಣ, ನನಗೆ ಬೇರೇನೂ ಗೊತ್ತಿಲ್ಲ. ಇಲ್ಲಿ ಕೆಲವು ಸಂಘ-ಸಹವಾಸಗಳಿಂದ ನಾನು ಸ್ವಲ್ಪ ಕೆಟ್ಟು ಹೋಗಿದ್ದೇನೆ. ಇನ್ನು ಮುಂದೆ ನನಗೆ ಯಾರ ಸಹವಾಸವೂ ಬೇಡ. ನಾನು ನೆಮ್ಮದಿಯಾಗಿ ಜೀವನ ಮಾಡುತ್ತೇನೆ. ನಾನು ಯಾವ ಕಲೆಯನ್ನು ನಂಬಿ ಬಂದೆನೋ, ಅದನ್ನೇ ನಂಬಿಕೊಂಡು ಜೀವನ ಮಾಡುತ್ತೇನೆ. ದಯಮಾಡಿ ಒಂದು ಅವಕಾಶ ಕೊಡಿ. ನೀವು ಅವಕಾಶ ಕೊಟ್ಟರೆ ನಿಜವಾಗಿಯೂ ನಾನು ನನ್ನ ಜೀವನವನ್ನು ಚೆನ್ನಾಗಿ ಮಾಡಿಕೊಳ್ಳುತ್ತೇನೆ” ಎಂದು ಮಡೆನೂರು ಮನು ಮನವಿ ಮಾಡಿಕೊಂಡಿದ್ದಾರೆ.
ಒಳ್ಳೆಯ ಬುದ್ಧಿ ಕಲಿಯುತ್ತೇನೆ
“ನಾನು 16-17 ವರ್ಷಗಳಿಂದ ಜೂನಿಯರ್ ಕಲಾವಿದನಾಗಿ ಕೆಲಸ ಮಾಡಿಕೊಂಡು, ಊರಲ್ಲಿ ಜಮೀನು ಕೆಲಸಗಳು ಮಾಡಿಕೊಂಡು, ಒಂದಿಷ್ಟು ರಿಯಾಲಿಟಿ ಶೋಗಳು ಮಾಡಿಕೊಂಡು ಬಂದವನು. ಇಷ್ಟು ಕಷ್ಟಪಟ್ಟವರೂ ಯಾರೂ ಗುಂಡಿಯನ್ನು ತಾನೇ ತೋಡಿಕೊಳ್ಳುವುದಿಲ್ಲ. ಇದು ನನ್ನ ಕೆಟ್ಟ ಸಮಯಕ್, ಹೀಗಾಗಿದೆ. ನೀವೆಲ್ಲಾ ಕ್ಷಮಿಸಿದರೆ, ನಿಜವಾಗಿಯೂ ನಾನು ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡು, ಮುಂದಕ್ಕೆ ಒಳ್ಳೆಯ ಬುದ್ಧಿ ಕಲಿಯುತ್ತೇನೆ. ನಾನು ತುಂಬಾ ಬದಲಾಗುತ್ತೇನೆ ಅಣ್ಣ, ನಿಮ್ಮ ಹೆಸರು ಹೇಳಿಕೊಂಡು ಎಲ್ಲೋ ಒಂದು ಹೊತ್ತು ಅನ್ನ ತಿನ್ನುತ್ತೇನೆ. ದಯಮಾಡಿ ಕ್ಷಮಿಸಿ.. ಕ್ಷಮಿಸಿ.. ದಯವಿಟ್ಟು ಅಣ್ಣ, ಇದು ನನ್ನ ಮನವಿ ಅಣ್ಣ..” ಎಂದು ಮಡೆನೂರು ಮನು ಆಡಿಯೋ ಕ್ಲಿಪ್ನಲ್ಲಿ ಹೇಳಿದ್ದಾರೆ.
ಧ್ರುವ ಸರ್ಜಾ ಹೇಳಿದ್ದೇನು?
ವಾಟ್ಸಾಪ್ನಲ್ಲಿ ಮಡೆನೂರು ಮನುಗೆ ರಿಪ್ಲೈ ಮಾಡಿರುವ ಧ್ರುವ ಸರ್ಜಾ, “ನೀವು ಆರಾಮಾಗಿರಿ, ನಿಮ್ಮ ತಾಯಿ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಮೊದಲು ಶಿವಣ್ಣ ಸರ್ ಮತ್ತು ದರ್ಶನ್ ಸರ್ ಬಳಿ ಮಾತನಾಡಿ. ಸಹೋದರ ಅವರು ನಮ್ಮ ಸೀನಿಯರ್ಸ್.. ನನ್ನ ಬಗ್ಗೆ ಯೋಚಿಸಬೇಡಿ. ದಯವಿಟ್ಟು ನಿಮ್ಮ ತಾಯಿ ಮತ್ತು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ.. ಕೈ ಹನುಮಾನ್..” ಎಂದು ಹೇಳಿದ್ದಾರೆ.