ಉಪೇಂದ್ರ ನಟನೆಯ ‘ಭಾರ್ಗವ’ ಸಿನಿಮಾ ಸದ್ದಿಲ್ಲದೇ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಆಗಿತ್ತು. ಇದೀಗ ಸರಳವಾಗಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಇದೇ ತಿಂಗಳ 23ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಈ ಬಗ್ಗೆ ನಿರ್ದೇಶಕ ನಾಗಣ್ಣ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ನಾಗಣ್ಣ ನಿರ್ದೇಶನದಲ್ಲಿ ಉಪೇಂದ್ರ ಈಗಾಗಲೇ 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 3 ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ಹಾಗಾಗಿ ಇಬ್ಬರು ಕಾಂಬಿನೇಷನ್ ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ಕಿರುತೆರೆ ನಟಿ ಅಂಕಿತಾ ಅಮರ್ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿದ್ದಾರೆ. ‘ಭಾರ್ಗವ’ ಚಿತ್ರಕ್ಕೆ ವೈಲೆಂಡ್ ಫ್ಯಾಮಿಲಿಮ್ಯಾನ್ ಎನ್ನುವ ಟ್ಯಾಗ್ಲೈನ್ ಕೂಡ ಇದೆ. ಹಾಗಾಗಿ ಇದೊಂದು ಫ್ಯಾಮಿಲಿ ಎಂಟರ್ಟೈನರ್ ಎನ್ನುವುದು ಗೊತ್ತಾಗುತ್ತಿದೆ.
“ಹಲಸೂರಿನ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸರಳವಾಗಿ ‘ಭಾರ್ಗವ’ ಚಿತ್ರಕ್ಕೆ ಪೂಜೆ ನೆರವೇರಿಸಿದೆವು. ಜೂನ್ 23ರಿಂದ ಬೆಂಗಳೂರಿನಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತಿದೆ. ಸದ್ಯಕ್ಕೆ ಹೊರಾಂಗಣ ಚಿತ್ರೀಕರಣವೇ ಇರಲಿದೆ. ಬಳಿಕ ಚಿಕ್ಕಮಗಳೂರು ಹಾಗೂ ಮೊದಲಾದ ಭಾಗಳಲ್ಲಿ ಶೂಟಿಂಗ್ ಮುಂದುವರೆಯಲಿದೆ” ಎಂದು ನಿರ್ದೇಶಕ ನಾಗಣ್ಣ ಹೇಳಿದ್ದಾರೆ. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆಯೂ ನಾಗಣ್ಣ ಮಾತನಾಡಿದ್ದಾರೆ. “ಉಪೇಂದ್ರ ಹಾಗೂ ಅಂಕಿತಾ ಅಮರ್ ಜೊತೆಗೆ ರಂಗಾಯಣ ರಘು, ಅವಿನಾಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಈ ವರ್ಷವೇ ಸಿನಿಮಾ ಬಿಡುಗಡೆ ಮಾಡುತ್ತೇವೆ. ಪ್ಯಾನ್ ಇಂಡಿಯಾ ಲೆಕ್ಕಾಚಾರ ಇಲ್ಲ ಕನ್ನಡದಲ್ಲಿ ಮಾತ್ರ. ‘ಕೋಟಿಗೊಬ್ಬ-2’ ಹಾಗೂ ‘ವಿಷ್ಣುವರ್ಧನ’ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ರಾಜ ರತ್ನಂ ಎಂಬುವವರು ಈ ಚಿತ್ರವನ್ನು ಸೆರೆಹಿಡಿಯಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿರಲಿದೆ” ಎಂದು ತಿಳಿಸಿದ್ದಾರೆ.
ಉಪ್ಪಿ ಹಾಗೂ ನಾಗಣ್ಣ ಈ ಹಿಂದೆ ಮಾಡಿದ್ದ ‘ಗೋಕರ್ಣ’, ‘ಗೌರಮ್ಮ’, ‘ಕುಟುಂಬ’ ಹಾಗೂ ‘ದುಬೈ ಬಾಬು’ ಎಲ್ಲವೂ ರೀಮೆಕ್ ಸಿನಿಮಾಗಳಾಗಿತ್ತು. ಆದರೆ ಈ ಬಾರಿ ಸ್ವಮೇಕ್ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷವೇ ಸಿನಿಮಾ ಬಿಡುಗಡೆ ಮಾಡುತ್ತೇವೆ. ನಮ್ಮದು ಪ್ಯಾನ್ ಇಂಡಿಯಾ ಅಲ್ಲ, ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುವ ಸಿನಿಮಾ ಎಂದು ನಿರ್ದೇಶಕ ನಾಗಣ್ಣ ಮಾಹಿತಿ ನೀಡಿದ್ದಾರೆ.
‘ಕಬ್ಜ’ ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ ‘ಯುಐ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. 10 ವರ್ಷಗಳ ನಂತರ ಉಪ್ಪಿ ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಇದು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಮೊದಲ 3 ದಿನ ಸಿನಿಮಾ ಕಲೆಕ್ಷನ್ ಚೆನ್ನಾಗಿತ್ತು. ‘ಮ್ಯಾಕ್ಸ್’ ಆರ್ಭಟ ಶುರುವಾದ ಬಳಿಕ ‘ಯುಐ’ ದರ್ಬಾರ್ ನಡೀಲಿಲ್ಲ. ಸದ್ಯ ಉಪೇಂದ್ರ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದ ಮುಖ್ಯ ಪಾತ್ರದಲ್ಲಿ ಉಪ್ಪಿ ಬಣ್ಣ ಹಚ್ಚಿದ್ದಾರೆ. ತೆಲುಗಿನ ‘ಆಂಧ್ರಕಿಂಗ್’ ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಇನ್ನು ಅರ್ಜುನ್ ಜನ್ಯಾ ನಿರ್ದೇಶನದ ’45’ ಸಿನಿಮಾ ಬಿಡುಗಡೆ ಆಗಬೇಕಿದೆ. ಆ ಚಿತ್ರದಲ್ಲಿ ಶಿವಣ್ಣ ಹಾಗೂ ರಾಜ್. ಬಿ ಶೆಟ್ಟಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಿರ್ದೇಶಕ ನಾಗಣ್ಣ ಸೈಲೆಂಟ್ ಆಗಿದ್ದರು. ‘ಕುರುಕ್ಷೇತ್ರ’ ಹಾಗೂ ‘ಗಿಮಿಕ್’ ಬಳಿಯ ಯಾವುದೇ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಇದೀಗ ಸೂರಪ್ಪ ಬಾಬು ನಿರ್ಮಾಣದಲ್ಲಿ ‘ಭಾರ್ಗವ’ ಸಿನಿಮಾ ಶುರುವಾಗಿದೆ. ಪ್ರಿಯಾಂಕಾ ಉಪೇಂದ್ರ ಕೂಡ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಶೀಘ್ರದಲ್ಲೇ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ.