ಚೌಕಿದಾರ್’ ಹೊಸ ಟ್ರೆಂಡ್
ಪೃಥ್ವಿ ಅಂಬರ್ ನಟನೆಯ ‘ಚೌಕಿದಾರ್’ ಸಿನಿಮಾ ನಾಯಕಿ ಧನ್ಯಾ ರಾಮ್ಕುಮಾರ್ ತಮ್ಮ ಪಾತ್ರದ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ. ‘ಚೌಕಿದಾರ್’ ಸಿನಿಮಾದಲ್ಲಿ ಸಾಯಿ ಕುಮಾರ್ ಜೊತೆಗೆ ನಟಿಸಿರುವುದು ಧನ್ಯಾ ರಾಮ್ಕುಮಾರ್ಗೆ ಹೆಮ್ಮೆ ತಂದಿದೆ.
ಹೈಲೈಟ್ಸ್:
‘ಚೌಕಿದಾರ್’ ಸಿನಿಮಾದಲ್ಲಿ ಗಟ್ಟಿ ಮನಸ್ಸಿನ ನಟಿಯಾದ ಧನ್ಯಾ ರಾಮ್ಕುಮಾರ್
‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ಅಂಬರ್ಗೆ ಧನ್ಯಾ ರಾಮ್ಕುಮಾರ್ ನಾಯಕಿ
ಸಿನಿಮಾದಲ್ಲಿ ಸೀರಿಯಸ್ ಹಾಗೂ ಜವಾಬ್ದಾರಿ ಇರುವ ಹುಡುಗಿಯ ಪಾತ್ರದಲ್ಲಿ ಧನ್ಯಾ ರಾಮ್ಕುಮಾರ್ ನಟಿಸಿದ್ದಾರೆ
ಕಿರಣ್ ಚಂದ್ರ
ಡಾ ರಾಜ್ ಕುಮಾರ್ ಕುಟುಂಬದ ಮೊದಲ ಹೀರೋಯಿನ್ ಧನ್ಯಾ ರಾಮ್ಕುಮಾರ್ ಕಳೆದ ವರ್ಷ ತುಂಬಾ ಬಿಝಿ ಇದ್ದರು. ಆದರೆ ಈ ವರ್ಷದ ಮೊದಲಾರ್ಧ ಮುಗಿಯುತ್ತಾ ಬಂದರೂ ಅವರ ನಟನೆಯ ಒಂದೂ ಸಿನಿಮಾದ ರಿಲೀಸ್ ಅಪ್ಡೇಟ್ ಬಂದಿರಲಿಲ್ಲ. ಕೊನೆಗೂ ಅವರ ‘ಚೌಕಿದಾರ್’ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದ್ದು, ಅದರ ಟೀಸರ್ ಹಾಗೂ ಹಾಡು ರಿಲೀಸ್ ಅಗಿದೆ.
ಗಟ್ಟಿ ಮನಸ್ಸಿನ ಹುಡುಗಿ
‘ಚೌಕಿದಾರ್ ಸಿನಿಮಾದಲ್ಲಿ ನನ್ನದು ಸೀರಿಯಸ್ ಮತ್ತು ಜವಾಬ್ದಾರಿ ಇರುವ ಹುಡುಗಿಯ ಪಾತ್ರ. ಜೀವನದಲ್ಲಿ ಬರುವ ತುಂಬಾ ಕಷ್ಟಗಳನ್ನು ಎದುರಿಸುತ್ತಾ, ಗಟ್ಟಿ ಮನಸ್ಸಿನ ನಾಯಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕ ಪೃಥ್ವಿ ಅಂಬರ್ ಪಾತ್ರದ ಹೋರಾಟಗಳಲ್ಲೂ ಜತೆಗೆ ನಿಲ್ಲುವ, ಅವರ ಜೀವನದಲ್ಲಿ ಬದಲಾವಣೆ ಹುಡುಗಿ ಆಗಿ ನಾನಾಗಿರುತ್ತೇನೆ. ಅಂಥ ಪಾತ್ರ ನನಗೆ ನೀಡಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಹೀರೋಯಿನ್ ಪಾತ್ರಗಳನ್ನು ನಿರ್ದೇಶಕರು ವಿಭಿನ್ನವಾಗಿ ಬರೆಯುತ್ತಾರೆ. ಇಲ್ಲಿ ನನ್ನ ಪಾತ್ರವೂ ಸ್ಪೆಷಲ್. ಅದರಲ್ಲೂ ಸಾಯಿಕುಮಾರ್ ಜತೆಗೆ ನಟಿಸಿದ್ದು ನನಗೆ ಹೆಮ್ಮೆ ಅನಿಸಿದೆ. ಅವರ ಸಿನಿಮಾಗಳನ್ನು ನೋಡಿ ಬೆಳೆದ ನಾವು ಸೆಟ್ನಲ್ಲಿ ಅವರ ಶಿಸ್ತು ನೋಡಿ ಕಲಿತೆ’ ಎಂದಿದ್ದಾರೆ ನಾಯಕಿ ಧನ್ಯಾ ರಾಮ್ಕುಮಾರ್.
ಫ್ಯಾಮಿಲಿ ಡ್ರಾಮಾ
ವರ್ಷದಲ್ಲಿ ಇಷ್ಟೇ ಸಿನಿಮಾ ಬರಬೇಕೆಂದು ನಾನು ಪ್ಲಾನ್ ಮಾಡಲ್ಲ. ಒಳ್ಳೆಯ ಸಿನಿಮಾ ಒಂದು ಬಂದರೂ ಸಾಕು. ಅದೇ ರೀತಿ ಪ್ರೇಕ್ಷಕನಿಗೆ ಇಷ್ಟವಾಗುವ ಕಥೆಗಳನ್ನೇ ಆಯ್ಕೆ ಮಾಡುತ್ತಿದ್ದೇನೆ ಎಂದಿರುವ ಧನ್ಯಾ ರಾಮ್ಕುಮಾರ್, ‘ಚೌಕಿದಾರ್ ಸಿನಿಮಾದಲ್ಲಿ ಆ್ಯಕ್ಷನ್ ಮಾತ್ರವಲ್ಲದೆ, ರೊಮ್ಯಾನ್ಸ್, ಎಮೋಷನ್, ಫ್ಯಾಮಿಲಿ ಡ್ರಾಮಾ ಇದೆ. ತಂದೆ ಮಗನ ಸೆಂಟಿಮೆಂಟ್, ನಾನು ಪೃಥ್ವಿ ಹೆಂಡತಿಯಾದ ಮೇಲೆ ಅವರ ಮನೆಯಲ್ಲಾಗುವ ಬದಲಾವಣೆ ಹೀಗೆ ಸಾಕಷ್ಟು ಅಪರೂಪದ ಅಂಶಗಳು ಇದರಲ್ಲಿವೆ’ ಎಂದು ಹೇಳಿದ್ದಾರೆ.
”ಕನ್ನಡ ಸಿನಿಮಾದಲ್ಲಿ ಈಗ ಯಾವ ಟ್ರೆಂಡ್ ಕೂಡ ನಡೆಯುತ್ತಿಲ್ಲ. ಯಾರಾದರೂ ಟ್ರೆಂಡ್ ಸೆಟ್ ಮಾಡಬೇಕಾದ ಕಾಲ ಬಂದಿದೆ. ಎಲ್ಲರೂ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದರೂ ಜನರು ನೋಡುತ್ತಿಲ್ಲ. ಒಂದೇ ಥರದ ಸಿನಿಮಾಗಳೂ ಬರುತ್ತಿಲ್ಲ. ಈ ನಿಟ್ಟಿನಲ್ಲಿ ‘ಚೌಕಿದಾರ್’ ಸಿನಿಮಾ ಟ್ರೆಂಡ್ ಸೃಷ್ಟಿಸಲಿದೆ. ಇದರಲ್ಲಿ ಎಲ್ಲರೂ ತಮ್ಮ ಕಂಫರ್ಟ್ ಝೋನ್ನಿಂದ ಹೊರಬಂದು ನಟಿಸಿದ್ದಾರೆ” ಎಂದಿದ್ದಾರೆ ಧನ್ಯಾ ರಾಮ್ಕುಮಾರ್.