ಬಳ್ಳಾರಿ : ಬಳ್ಳಾರಿ ತಾಲ್ಲೂಕಿನ ಗೋಟೂರು ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದ ಅಬಕಾರಿ ಪೊಲೀಸರು ಮಿಂಚಿನ ದಾಳಿ ನಡೆಸಿ, ಅಂದಾಜು 5 ಲಕ್ಷ ರೂಗಳ ಮೌಲ್ಯದ ಗಾಂಜಾಗಿಡಗಳನ್ನು ಪತ್ತೆ ಮಾಡಿದ್ದು, ಕೇಸ್ ದಾಖಲಿಸಿಕೊಂಡಿದ್ದಾರೆ.
ಗೋಟೂರು ಗ್ರಾಮದಲ್ಲಿನ ಜಮೀನೊಂದರಲ್ಲಿ ಮೆಣಸಿನಕಾಯಿ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿದೆ. ಅಬಕಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಮೆಣಸಿನಕಾಯಿ ಬೆಳೆಯ (ಫಸಲಿನ) ನಡುವೆ ಬೆಳೆಸಲಾಗಿದ್ದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ್ದಾರಲ್ಲದೇ, ಅನೇಕ ಗಾಂಜಾಗಿಡಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಡಿಸಿ ಮಂಜುನಾಥ್, ಡಿಎಸ್ಪಿ ಶರಣಪ್ಪ ಕರಡಿ, ಪಿಎಸ್ಐ ಹೊನ್ನೂರ್ವಲಿ ಮತ್ತು ಸಿಬ್ಬಂದಿ ವರ್ಗದವರು ದಾಳಿ ನಡೆಸಿ, ಅಕ್ರಮವಾಗಿ ಬೆಳೆಯಲಾಗಿದ್ದ ಅಂದಾಜು 40ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾದ ಮೌಲ್ಯ ಐದು ಲಕ್ಷ ರೂಪಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು ಐದರಿಂದ ಆರು ಅಡಿಗಳ ಎತ್ತರಕ್ಕೆ ಗಾಂಜಾಗಿಡಗಳನ್ನು ಬೆಳೆಸಲಾಗಿತ್ತು ಎಂದು ಹೇಳಲಾಗಿದೆ.
ಅಬಕಾರಿ ಪೊಲೀಸರು ದಾಳಿ ನಡೆಸಿದ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮಾದಕ ವಸ್ತುಗಳ ನಿಷೇಧ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



