ಬೆಂಗಳೂರು : ಇಪ್ಪತ್ತೊಂದನೇ ಶತಮಾನ ಮಹಿಳೆಯರ ಶತಮಾನವಾಗಿದ್ದು, ಮಹಿಳೆಯರು ಜಾಗತಿಕವಾಗಿ ನಾಯಕತ್ವ ವಹಿಸಿದ್ದಾರೆ ಎಂದು ರಾಜ್ಯ ಮಹಿಳಾ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಹೇಳಿದ್ದಾರೆ. ರಾಜಾಜಿ ನಗರದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇದೀಗ ಜಾಗತಿಕವಾಗಿ ನಾಯಕತ್ವ ಪಡೆದುಕೊಂಡಿದ್ದಾರೆ. ಎಲ್ಲಾ ವಲಯಗಳಲ್ಲೂ ತನ್ನ ಛಾಪು ಮೂಡಿಸುತ್ತಿದ್ದು, ಮಹಿಳೆಯರ ಸಾಮರ್ಥ್ಯ ಎಲ್ಲೆಡೆ ಸಾಬೀತಾಗುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣದಲ್ಲೂ ಮಹಿಳೆಯರು ಮಂಚೂಣಿಯಲ್ಲಿ ತನ್ನ ತಾಯ್ನೆಲ ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರಷ್ಯಾ ವಿರುದ್ಧ ಜಾಗತಿಕವಾಗಿ ಎಲ್ಲಾ ದೇಶಗಳನ್ನು ಸಂಘಟಿಸುವ ರಾಜತಾಂತ್ರಿಕ ಕೆಲಸಗಳಲ್ಲೂ ಉಕ್ರೇನ್ ನ ಮಹಿಳಾ ರಾಜಕಾರಣಿಗಳು ಅದ್ಭುತ ಕೆಲಸದಲ್ಲಿ ತೊಡಗಿದ್ದಾರೆ ಎಂದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿಂದ ಇಬ್ಬರು ಪತ್ರಕರ್ತರ ಮಕ್ಕಳಿಗೆ ಶಿಕ್ಷಣ ಉದ್ದೇಶದಿಂದ ಚೆಕ್ ವಿತರಿಸಿದ ಹಿರಿಯ ಪತ್ರಕರ್ತ, ನಿರೂಪಕ ವಿ. ನಂಜುಂಡಪ್ಪ ಮಾತನಾಡಿ, ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ದೇಶದ ಶೇ ೭೦ ಮಂದಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಕೃಷಿ ಭೂಮಿಯಲ್ಲಿ ದುಡಿಯುತ್ತಿರುವವರೇ ಮಹಿಳೆಯರು. ಮಹಿಳೆಯರಿಲ್ಲದಿದ್ದರೆ ಆಹಾರ ಭದ್ರತೆ ಸಾಧಿಸಲು ಆಗುತ್ತಿರಲಿಲ್ಲ. ಹೈನುಗಾರಿಕೆಯಲ್ಲಿ ಮಹಿಳೆಯರೇ ನಾಯಕರು. ಹಾಲು ಉತ್ಪಾದನೆ ಇಲ್ಲದಿದ್ದರೆ ಬಹುತೇಕ ಮಂದಿ ಕೃಷಿ ತೊರೆಯುತ್ತಿದ್ದರು. ಆದರೆ ಮಹಿಳೆಯರು ಕೃಷಿಗೆ ಕೊಡುತ್ತಿರುವ ಕೊಡುಗೆಯ ಬಗ್ಗೆ ಮೌಲ್ಯಮಾಪನ ಆಗಬೇಕು ಎಂದರು.
ಮಹಿಳೆಯರು ಸಾಧನೆಯತ್ತ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಅಗತ್ಯವಿದೆ.
ದುರಂತವೆಂದರೆ ಹಿಜಾಬ್ ನಂತಹ ಕೋಮು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮುಸ್ಲಿಂ ವಿದ್ಯಾರ್ಥಿನೀಯರ ಶಿಕ್ಷಣಕ್ಕೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಾಜದಲ್ಲಿ ಶಾಂತಿ ಕದಡುವ, ಸಾಮರಸ್ಯ ಹಾಳು ಮಾಡುವ ಪ್ರಯತ್ನಗಳು ಹೀಗೆ ಮುಂದುವರೆದರೆ ಜಗತ್ತಿನ ಮಂಚೂಣಿ ದೇಶವಾಗಿರುವ ಭಾರತ ಮುಂದಿನ ಎಂಟರಿಂದ ಹತ್ತು ವರ್ಷಗಳಲ್ಲಿ ಹಿಂದುಳಿದ ಆಫ್ರಿಕನ್ ದೇಶಗಳಿದರೆ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಶಿವಕುಮಾರ್ ನಾಗರ ನವಿಲೆ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ವಿ ಸೌಭಾಗ್ಯ, ಲಯನ್ಸ್ ಕ್ಲಬ್ ಡಿಸಿ ಶಾಂತಲಾ ದೇವರಾಜ್, ಪ್ರೆಸ್ ಕ್ಲಬ್ ಪದಾಧಿಕಾರಿಗಳಾದ ಜಿ.ಎನ್.ರವಿ ಕುಮಾರ್, ಎಂ.ಪಿ. ಮಂಜುನಾಥ್, ಪುಷ್ಪ, ಚೈತ್ರ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.