ವಿಧಾನಸಭಾ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಫರೀದ್ ಅವಿರೋಧವಾಗಿ ಆಯ್ಕೆ

ಬೆಂಗಳೂರು: 16 ನೇ ವಿಧಾನಸಭೆ ಅಧಿವೇಶನದಲ್ಲಿ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಫರೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಮುಖ್ಯಮಂತ್ರಿಗಳ ಸೂಚನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದಿಸಿದರು.
ಯು.ಟಿ.ಖಾದರ್ ಫರೀಧ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಹಂಗಾಮಿ ಸಭಾಧ್ಯಕ್ಷರಾದ ಆರ್. ವಿ. ದೇಶಪಾಂಡೆ ಅಂಗೀಕರಿಸಿದರು.
ಸಭಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದ ಯು.ಟಿ. ಖಾದರ್ ಫರೀದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸದನದ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಸದನದಲ್ಲಿ ಸಚಿವಾರದ ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿ.ಟಿ.ದೇವೇಗೌಡ, ಅರಗಜ್ಞಾನೇಂದ್ರ, ಹೆಚ್.ಕೆ. ಪಾಟೀಲ್, ಟಿ.ಬಿ.ಜಯಚಂದ್ರ, ವಿ. ಸುನೀಲ್ ಕುಮಾರ್, ಜನಾರ್ಧನ ರೆಡ್ಡಿ, ಬಿ.ಪಿ. ಹರೀಶ್ಕುಮಾರ್, ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ, ಕೋನರೆಡ್ಡಿ, ಬಿ.ಆರ್. ಪಾಟೀಲ್, ವಿಜಯೇಂದ್ರ ಯಡಿಯೂರಪ್ಪ ಅವರೂ ಸಹ ಸಭಾಧ್ಯಕ್ಷರಿಗೆ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದರು.